
ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ. ಆದರೆ ಮೂರನೇ ಪಂದ್ಯದ ಫಲಿತಾಂಶ ನ್ಯೂಜಿಲ್ಯಾಂಡ್ ಪರವಾಗಿ ಬರಲಿದೆ ಎಂಬ ವಿಶ್ವಾಸವನ್ನು ನ್ಯೂಜಿಲ್ಯಾಂಡ್ ತಂಡದ ವೇಗಿ ಟಿಮ್ ಸೌಥಿ ಹೇಳಿದ್ದಾರೆ.
ಸರಣಿಯ ಮೊದಲೆರಡು ಪಂದ್ಯಗಳು ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದಿತ್ತು. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ನೀಡಿದ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿ ಗೆಲುವನ್ನು ಪಡೆದುಕೊಂಡಿತ್ತು. ಮೂರನೇ ಪಂದ್ಯ ಹ್ಯಾಮಿಲ್ಟನ್ನ ಸ್ಯಾಡನ್ ಪಾರ್ಕ್ನಲ್ಲಿ ನಡೆಯಲಿದೆ. ಇದು ನ್ಯೂಜಿಲ್ಯಾಂಡ್ಗೆ ಲಾಭವಾಗಲಿದ ಎಂಬುದು ಟಿಮ್ ಸೌಥಿ ಲೆಕ್ಕಾಚಾರ.
'ಮೊದಲೆರಡು ಪಂದ್ಯಗಳಿಂದ ನ್ಯೂಜಿಲ್ಯಾಂಡ್ ತಂಡ ಪಾಠವನ್ನು ಕಲಿತಿದೆ. ಮೊದಲ ಪಂದ್ಯವನ್ನು ಗೆಲ್ಲುವ ಅವಕಾಶವನ್ನು ನಾವಾಗಿಯೇ ಕಳೆದುಕೊಂಡೆವು. ಆದರೆ ಮೂರನೇ ಪಂದ್ಯದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಆದ ತಪ್ಪು ನಡೆಯುವುದಿಲ್ಲ ಎಂದಿದ್ದಾರೆ ನ್ಯೂಜಿಲ್ಯಾಂಡ್ ತಂಡದ ಅನುಭವಿ ವೇಗಿ ಟಿಮ್ ಸೌಥಿ.
ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ನ್ಯುಜಿಲ್ಯಾಂಡ್ ಸರಣಿಯನ್ನು ಜೀವಂತವಾಗುಳಿಯುವಂತೆ ಮಾಡುತ್ತೇವೆ ಎಂಬ ಮಾತನ್ನು ಟಿಮ್ ಸೌಥಿ ಮಾತನಾಡುತ್ತಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ಇನ್ ಫಾರ್ಮ್ ಬ್ಯಾಟ್ಸ್ಮನ್ಗಳಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರನ್ನು ಕಟ್ಟಿ ಹಾಕಲು ವಿಶೇಷ ರಣತಂತ್ರ ಹೆಣೆದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಸೌಥಿ, ಯಾವುದೇ ಬ್ಯಾಟ್ಸ್ಮನ್ಗಳನ್ನು ಟಾರ್ಗೆಟ್ ಮಾಡುತ್ತಿಲ್ಲ. ಆದರೂ ಯುವ ಆಟಗಾರರು ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ ಎಂದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟಿ20 ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯವನ್ನು ನ್ಯೂಜಿಲ್ಯಾಂಡ್ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ನ್ಯೂಜಿಲ್ಯಾಂಡ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿದೆ.