ವಿಶ್ವದ ದಿಗ್ಗಜ ಫುಟ್ಬಾಲ್ ಆಟಗಾರ ಲಿಯಾನೇಲ್ ಮೆಸ್ಸಿ ಭಾರತದ ಪ್ರವಾಸ ಆರಂಭವಾಗಿದೆ. ಶನಿವಾರ ತಡ ರಾತ್ರಿ ಕೋಲ್ಕತ್ತಾಕ್ಕೆ ಆಗಮಿಸಿದ ಮೆಸ್ಸಿ, ಈ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದರು. ಈ ಎಲ್ಲ ಕಾರ್ಯಕ್ರಮದ ಟಿಕೆಟ್ಗಳು ಈಗಾಗಲೇ ಮಾರಟವಾಗಿದ್ದವು. ಕೋಲ್ಕತ್ತಾದಲ್ಲಿ ಮೆಸ್ಸಿ ತಮ್ಮದೇ 7 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಿದರು. ಇದೇ ವೇಳೆ ಮೆಸ್ಸಿ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿಯ ಕಾರ್ಯಕ್ರಮದಲ್ಲೂ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಮೆಸ್ಸಿ ಕೇವಲ 20 ನಿಮಿಷಗಳ ಕಾಲ ಮಾತ್ರ ಉಪಸ್ಥಿತಿರಿದ್ದರು ಎಂದು ಆರೋಪಿಸಿ ಅಭಿಮಾನಿಗಳು ಗದ್ದಲ ಮಾಡಿದರು. ಈ ವೇಳೆ ಲಾಠಿಚಾರ್ಜ್ ಸಹ ಮಾಡಲಾಯಿತು. ಮೆಸ್ಸಿ ಕಾರ್ಯಕ್ರಮದ ವೇಳೆ ನಡೆದ ಗಲಾಟೆಗೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಮೆಸ್ಸಿ ಅವರನ್ನು ಒಮ್ಮೆ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು. ಆದರೆ ಮೆಸ್ಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಈ ವೇಳೆ ಮೆಸ್ಸಿ ಸುತ್ತಲೂ ರಾಜಕಾರಣಿಗಳು, ಫುಟ್ಬಾಲ್ ಕ್ಲಬ್ ಅಧಿಕಾರಿಗಳು ಹಾಗೂ ಫುಟ್ಬಾಲ್ ತಂಡದ ಸ್ಟಾರ್ ಆಟಗಾರರು ಇವರನ್ನು ಸುತ್ತುವರೆದಿದ್ದರು. ಹೀಗಾಗಿ ಅಭಿಮಾನಿಗಳಿಗೆ ಮೆಸ್ಸಿ ಅವರನ್ನು ನೋಡಲು ಸಾಧ್ಯವೇ ಆಗಲಿಲ್ಲ. ಇದರಿದ ಅಭಿಮಾನಿಗಳಿಗೆ ತೀವ್ರ ಬೇಸರವಾಯಿತು. ಇನ್ನು ಮೆಸ್ಸಿ ಕೇವಲ 20 ನಿಮಿಷ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಅಭಿಮಾನಿಗಳಿಗೆ ಆಘಾತವಾಯಿತು. ಇದರ ಪರಿಣಾಮ ಅಭಿಮಾನಿಗಳು ಪ್ರತಿಭಟನೆ ಮಾಡಲು ಆರಂಭಿಸಿ, ಮೈದಾನಕ್ಕೆ ನೀರಿನ ಬಾಟಲಿಗಳನ್ನು ಎಸೆದರು.
ಇನ್ನು ಅನೇಕ ಅಭಿಮಾನಿಗಳು ಸ್ಟೇಡಿಯಂನ ಆಸನಗಳನ್ನು ಕಿತ್ತು ಮೈದಾನಕ್ಕೆ ಎಸೆದರು. ಇನ್ನು ಮೈದಾನ ಹಾಗೂ ವೀಕ್ಷಕರ ಗ್ಯಾಲರಿಗೆ ಹಾಕಲಾಗಿದ್ದ ಬೇಲಿಯನ್ನು ಬೇಧಿಸಿದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದರು. ಇದರಿಂದ ಸಾವಿರಾರು ಅಭಿಮಾನಿಗಳು ಮೈದಾನವನ್ನು ಪ್ರವೇಶಿಸಿ, ವೇದಿಕೆಯನ್ನ ಧ್ವಂಸಗೊಳಿಸಿದರು. ಇನ್ನು ಹಲವು ಅಭಿಮಾನಿಗಳು ಬೆಂಕಿ ಹಚ್ಚುವ ಪ್ರಯತ್ನವನ್ನು ಸಹ ಮಾಡಿದರು. ಪೊಲೀಸರು ಈ ಸ್ಥಿತಿಯನ್ನು ನಿಯಂತ್ರಿಸಲು ಲಾಠಿಚಾರ್ಜ್ ನಡೆಸಿದರು.
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಅವ್ಯವಸ್ಥೆಯ ಕಾರಣಗಳನ್ನು ತನಿಖೆ ಮಾಡಲು ತನಿಖಾ ಸಮಿತಿಯನ್ನು ರಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಸಮಿತಿಯು ನಿವೃತ್ತ ನ್ಯಾಯಮೂರ್ತಿ ಅಸಿಮ್ ಕುಮಾರ್ ರೇ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಮತ್ತು ಬೆಟ್ಟ ವ್ಯವಹಾರ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಹ ಸದಸ್ಯರಾಗಿರುತ್ತಾರೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದು ತಿಳಿಸಿದ ಅವರು, ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳಿದ್ದಾರೆ.
ಈ ಘಟನೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಈ ಘಟನೆಯನ್ನು ಟೀಕಿಸಿದ್ದಾರೆ. ದೊಡ್ಡ ಕಾರ್ಯಕ್ರಮದಲ್ಲಿ ಜನಸಂದಣಿಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.