ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಒಂದು ದಿನದ ರಜೆ ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಭಾರತದ ಅಗ್ರ ಬ್ಯಾಟ್ಸ್ಮನ್ ಈಗಾಗಲೇ ಬಿಸಿಸಿಐ ಅನುಮತಿಯನ್ನು ಸಹ ಕೋರಿದ್ದಾರೆ.
ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಟಿ20 ಪಂದ್ಯಕ್ಕೆ ತಯಾರಿ ನಡೆಸಿದೆ. ಜನವರಿ 17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈ ಪಂದ್ಯದ ನಂತರ, ರೋಹಿತ್ ಶರ್ಮಾ ಮತ್ತು ತಂಡವು ಜನವರಿ 20 ರಂದು ಹೈದರಾಬಾದ್ಗೆ ತೆರಳಲಿದೆ. ಅಲ್ಲಿ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಭಾರತ ತಂಡ ಹೈದರಾಬಾದ್ನಲ್ಲಿ ಅಭ್ಯಾಸ ಸೆಷನ್ ಆಯೋಜಿಸಲಾಗಿದೆ.

ಕ್ರಿಕ್ಬಜ್ನಲ್ಲಿನ ವರದಿಯ ಪ್ರಕಾರ, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ಬಿಸಿಸಿಐನಿಂದ ಒಂದು ದಿನದ ರಜೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ, ಟಿ20 ಸರಣಿಯಲ್ಲಿ ಭಾಗವಹಿಸುವ ಭಾರತ ತಂಡದ ಎಲ್ಲಾ ಸದಸ್ಯರು ಮತ್ತು ಕೋಚಿಂಗ್ ಸಿಬ್ಬಂದಿಗೆ ಕೊನೆಯ ಪಂದ್ಯದ ನಂತರ ಎರಡು ದಿನಗಳ ವಿರಾಮ ನೀಡಲಾಗಿದೆ.
ಎರಡು ದಿನದ ಬಿಡುವಿನ ಬಳಿಕ ತಂಡ ಜನವರಿ 20 ರಂದು ಹೈದರಾಬಾದ್ನಲ್ಲಿ ಸೇರಲಿದೆ. ವಿರಾಟ್ ಕೊಹ್ಲಿ ಇಲ್ಲಿ ನಡೆಯಲಿರುವ ಅಭ್ಯಾಸದ ಮೊದಲ ಸೇಷನ್ನಲ್ಲಿ ಭಾಗವಹಿಸುವುದಿಲ್ಲ. ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸಲಾಗಿದ್ದು, ಅವರು ಅಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತದ ಗಣ್ಯರಿಗೆ ವಿಶೇಷ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆ. ಈ ಆಹ್ವಾನ ಪತ್ರಿಕೆಯನ್ನು ಸಂಕಲ್ಪ್ ಎಂದು ಹೆಸರಿಸಲಾಗಿದೆ. ಅಲ್ಲದೆ, ಅದರ ಕವರ್ ಪೇಜ್ ನಲ್ಲಿ ಕಾರ್ಯಕ್ರಮದ ಪರಿಚಯ ಇದೆ.
ಜನವರಿ 22 ರಂದು ರಾಮ ಮಂದಿರದ ಶಂಕುಸ್ಥಾಪನೆ ಅದ್ಧೂರಿಯಾಗಿ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಇನ್ನಷ್ಟು ಅದ್ಧೂರಿಯಾಗಿ ಮಾಡಲಾಗಿದೆ. ರಾಮಮಂದಿರದ ಚಿತ್ರವನ್ನು ಅದರ ಮುಖಪುಟದಲ್ಲಿ ಮುದ್ರಿಸಲಾಗಿದೆ. ಆದರೆ ಒಳಗೆ ಭಗವಾನ್ ಶ್ರೀರಾಮನ ಮಗುವಿನ ರೂಪದ ಚಿತ್ರವಿದೆ.

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಆಹ್ವಾನ ನೀಡಲಾಗಿದೆ. ಧೋನಿ ಅವರಲ್ಲದೆ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೂ ಆಹ್ವಾನ್ ನೀಡಲಾಗಿದೆ.
ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಚಲನಚಿತ್ರ ಕಲಾವಿದರು, ವಿಜ್ಞಾನಿಗಳು, ಕ್ರೀಡಾಪಟುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗಿದೆ. ಆಮಂತ್ರಣ ಸ್ವೀಕರಿಸಿದ ನಂತರ ಸಚಿನ್ ತೆಂಡೂಲ್ಕರ್ ಮತ್ತು ಧೋನಿ ಜನವರಿ 22 ರಂದು ಅಯೋಧ್ಯೆ ತಲುಪಿ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ.