ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಈಗ ಭಾರತ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ. ಹಿರಿಯ ಆಟಗಾರರನ್ನು ಕಡೆಗಣಿಸಿ, ಯುವ ಆಟಗಾರರಿಗೆ ಮಣೆ ಹಾಕಿದ್ದಕ್ಕೆ ಒಳ್ಳೆಯ ಉಡುಗೊರೆ ಸಿಕ್ಕಂತೆ ಆಗಿದೆ. ಟೀಮ್ ಇಂಡಿಯಾ, ಆಸ್ಟ್ರೇಲಿಯಾಕ್ಕೆ ತಂಡವನ್ನು ಪ್ರಕಟಿಸಿದಾಗಲೇ ಹಲವು ಚರ್ಚೆಗಳು ಆರಂಭವಾಗಿದ್ದವು. ತಂಡದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ಗಳ ಕೊರತೆ ತಂಡದಲ್ಲಿ ಎದ್ದು ಕಾಣುವಂತಿತ್ತು. ಪರಿಣಾಮ ಸದ್ಯ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸುತ್ತಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಲು ತಾನು ಮಾಡಿಕೊಂಡ ತಪ್ಪುಗಳೇ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಎರಡು ಪ್ರವಾಸದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಗೆಲುವು ಸಾಧಿಸಿತ್ತು. ಈ ಗೆಲುವಿನಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರ ಕೊಡುಗೆ ಅಪಾರ. ಅವರನ್ನು ಕೈ ಬಿಟ್ಟು ತಂಡದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿದ್ದು ಟೀಕೆಗೆ ಗುರಿಯಾಗಿತ್ತು. ಈಗ ಟೀಮ್ ಇಂಡಿಯಾ ಸೋಲಿನ ಭೀತಿಯಲ್ಲಿರುವವಾಗ ಹಲವು ವಿಷಯಗಳು ಬಹಿರಂಗವಾಗುತ್ತಿವೆ.

ಟೀಮ್ ಇಂಡಿಯಾಕ್ಕೆ ಗೌತಮ್ ಗಂಭೀರ್ ಎಂಟ್ರಿ ನೀಡಿ ಆರು ತಿಂಗಳು ಕಳೆದಿವೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿದ್ದು ಬಿಟ್ಟರೆ ಬೇರೆಯಾವ ಸಾಧನೆ ಮಾಡಿಲ್ಲ. ಅಲ್ಲದೆ ಸಾಲು ಸಾಲು ಸೋಲುಗಳು ತಂಡವನ್ನು ಕಂಗೆಡಿಸಿವೆ. ಈ ನಡುವೆ ಮೆಲ್ಬೋರ್ನ್ ಸೋಲಿನ ನಂತರ ಗೌತಮ್ ಗಂಭೀರ್ ಸಿಟ್ಟಿಗೆದ್ದ ಸುದ್ದಿಯ ಬೆನ್ನಲ್ಲೇ ಈಗ ಬಂದಿರುವ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ಗಂಭೀರ್ ಅವರಿಗ ಚೇತೇಶ್ವರ್ ಪೂಜಾರ ತಂಡದಲ್ಲಿ ಇರಬೇಕು ಎಂಬ ಆಸೆ ಇತ್ತು. ಆದರೆ ಇವರ ಆಸೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೊಪ್ಪು ಹಾಕಲಿಲ್ಲ. ಅಂದಹಾಗೆ ಈ ತೀರ್ಪಿನ ಹಿಂದೆ ರೋಹಿತ್ ಶರ್ಮಾ ಸಹ ಧ್ವನಿ ಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪೂಜಾರ ಇಲ್ಲದೆ ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಗಲೂ ಎಚ್ಚರಗೊಳ್ಳದ ಆಯ್ಕೆ ಸಮಿತಿ ಈಗ ಕೈ ಕೈ ಹಿಚಿಕೊಕೊಳ್ಳುತ್ತಿದೆ.

ಆಸ್ಟ್ರೇಲಿಯಾ ಮೈದಾನಕ್ಕೆ ಇಳಿಯುವ ಮುನ್ನವೇ ಪಂದ್ಯ ಗೆದ್ದಂತೆ ಬೀಗಲು ಆರಂಭಿಸಿತು. ಇದಕ್ಕೆ ಕಾರಣ ತಂಡದಲ್ಲಿ ಮೊಹಮ್ಮದ್ ಶಮಿ ಹಾಗೂ ಚೇತೇಶ್ವರ್ ಪೂಜಾರ ಅನುಪಸ್ಥಿತಿ ಅವರಿಗೆ ಎಷ್ಟು ಲಾಭದಾಯಕವಾಗಿರಲಿದೆ ಎಂಬುದು ಅವರಿಗೆ ಮಾತ್ರ ತಿಳಿದಿತ್ತು. ಕಳೆದೆರಡು ಪ್ರವಾಸದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಎರಡು ಬಾರಿ ಎತ್ತಿ ಹಿಡಿದಿರುವಲ್ಲಿ ಚೇತೇಶ್ವರ್ ಪೂಜಾರ ಅವರ ಕಾಣಿಕೆ ಮರೆಯುವಂತಿಲ್ಲ. ಗಬ್ಬಾ ಟೆಸ್ಟ್ನಲ್ಲಿ ಪೂಜಾರ ಮೈಗೆಲ್ಲಾ ಏಟು ತಿಂದು ಪಂದ್ಯವನ್ನು ಗೆಲ್ಲಿಸಿದ ಧಾಟಿ ಸಹ ಆಯ್ಕೆ ಸಮಿತಿಯ ಕಣ್ಣು ಮುಂದೆ ಬಾರದೆ ಇರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.