ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿ ನವೆಂಬರ್ನಲ್ಲಿ ಆರಂಭವಾಗಲಿದೆ. ಈ ಟೂರ್ನಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬಹು ನಿರೀಕ್ಷಿತ ಸರಣಿಯನ್ನು ಕುತೂಹಲದಿಂದ ಅಭಿಮಾನಿಗಳು ನೋಡುತ್ತಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದೃಷ್ಟಿಯಿಂದ ಈ ಸರಣಿ ಬಹುಮುಖ್ಯವಾಗಿದೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ ಯಾವ ಕಾಂಬಿನೇಷ್ನೊಂದಿಗೆ ಕಣಕ್ಕೆ ಇಳಿಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಈಗ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರು ಭರವಸೆಯನ್ನು ಮೂಡಿಸಿದ್ದಾರೆ. ಆದರೆ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಅನುಭವಿ ಆಟಗಾರ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ಟೆಸ್ಟ್ ಸ್ಪೇಷಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ, 16 ತಿಂಗಳಿನಿಂದ ಟೀಮ್ ಇಂಡಿಯಾ ಪರ ಅಖಾಡಕ್ಕೆ ಇಳಿದಿಲ್ಲ. ಸದ್ಯ ಚೇತೇಶ್ವರ್ ಪೂಜಾರ್ ದೇಶೀಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ, ತಮ್ಮನ್ನು ಆಸ್ಟ್ರೇಲಿಯಾ ಸರಣಿಗೆ ಪರಿಗಣಿಸುವಂತೆ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುತ್ತಿದ್ದಾರೆ. ಸೌರಾಷ್ಟ್ರ ಪರ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಆಡಿ 250 ರನ್ ಸಿಡಿಸಿದ್ದಾರೆ. ಇದರಲ್ಲಿ ಒಂದು ದ್ವಿಶತಕ ಸಹ ಸೇರಿದೆ.
ಟೆಸ್ಟ್ನಲ್ಲಿ ಬೇಕಾದ ನೆಲಕ್ಕೂರಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪೂಜಾರ, ಬೌನ್ಸಿ ಪಿಚ್ಗಳಲ್ಲೂ ಸ್ಥಿರ ಪ್ರದರ್ಶನ ನೀಡುವ ಆಟಗಾರ. ಕಳೆದ ಬಾರಿ ಭಾರತ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದ್ದಾಗ, ಎದುರಾಳಿ ಬೌಲರ್ಗಳಿಗೆ ಕಾಟ ನೀಡಿದ್ದ ಭಾರತೀಯ ಬ್ಯಾಟರ್ಗಳಲ್ಲಿ ಪೂಜಾರಗೆ ಅಗ್ರ ಸ್ಥಾನ. ಇನ್ನೇನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಇವರ ಅನುಭವವನ್ನು ಪರಿಗಣಿಸಬೇಕು. ಅಂದಾಗ ಮಧ್ಯಮ ಕ್ರಮಾಂಕಕ್ಕೆ ಬಲ ಬಂದಂತೆ ಆಗುತ್ತದೆ.
2021ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಿದ್ದಾಗ ಚೇತೇಶ್ವರ್ ಪೂಜಾರ ಟೀಮ್ ಇಂಡಿಯಾದ ಭಾಗವಾಗಿದ್ದರು. ಈ ವೇಳೆ ಇವರು ಭಾರತದ ಪರ 4 ಟೆಸ್ಟ್ಗಳ 8 ಇನಿಂಗ್ಸ್ಗಳಲ್ಲಿ 271 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಗರಿಷ್ಠ ಸ್ಕೋರ್ 77 ಆಗಿದೆ. ಇದರಲ್ಲಿ ಮೂರು ಆರ್ಧಶತಕಗಳು ಸೇರಿವೆ. ಈ ಎಲ್ಲ ಅಂಕಿ ಅಂಶಗಳಲ್ಲಿ ಎಲ್ಲರ ದೃಷ್ಟಿ ಕದ್ದಿರುವುದು, ಇವರ ಎದುರಿಸುವ ಎಸೆತಗಳು. ಇವರು ಒಟ್ಟಾರೆ ಟೂರ್ನಿಯಲ್ಲಿ 928 ಎಸೆತಗಳನ್ನು ಎದುರಿಸಿ ತಂಡಕ್ಕೆ ಆಧಾರವಾಗಿದ್ದ ಆಟಗಾರ.

ಆಸ್ಟ್ರೇಲಿಯಾ ವಿರುದ್ಧ ಚೇತೇಶ್ವರ್ ಪೂಜಾರ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಆಸೀಸ್ ವಿರುದ್ಧ 25 ಟೆಸ್ಟ್ ಪಂದ್ಯಗಳ 45 ಇನಿಂಗ್ಸ್ನಲ್ಲಿ 2074 ರನ್ಗಳನ್ನು ಗಳಿಸಿದ್ದಾರೆ. ಅಲ್ಲದೆ 5 ಶತಕ, 11 ಅರ್ಧಶತಕ ಸೇರಿವೆ. ಇವರ ಅನುಭವವನ್ನು ಪರಿಗಣಿಸಿ ಬಿಸಿಸಿಐ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.