
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಇನ್ನು ಒಂದೇ ವಾರದಲ್ಲಿ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಎರಡೂ ತಂಡಗಳ ಆಟಗಾರರು ಈಗ ಚೆನ್ನೈ ತಲುಪಿದ್ದು ಹೋಟೆಲ್ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಡಿಲೇಟ್ ಟೆಸ್ಟ್ನಲ್ಲಿ ಭಾರತದ ಹೀನಾಯ ಸೋಲಿನ ನಂತರ ಭಾರತ ತಿರುಗಿ ಬಿದ್ದ ರೀತಿಗೆ ಚೇತೇಶ್ವರ್ ಪೂಜಾರ ಯುವ ಆಟಗಾರರ ಪ್ರದರ್ಶನ ಕಾರಣ ಎಂದು ಪ್ರಶಂಸಿಸಿದರು. ವಿರಾಟ್ ಕೊಹ್ಲಿಯ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ಉತ್ತಮವಾಗಿ ತಂಡವನ್ನು ಮುನ್ನಡೆಸಿದರು ಎಂದು ಪೂಜಾರ ಹೇಳಿದರು.
"ಹೌದು, ವಿರಾಟ್ ಕೊಹ್ಲಿ ತಂಡವನ್ನು ತೊರೆಯಬೇಕಾಗಿತ್ತು. ಆದರೆ ಅದು ಸುಲಭವಾಗಿರಲಿಲ್ಲ. ನಮ್ಮ ತಂಡದ ಬಲ ಆಗ ಹಿಂದಿನಂತಿರಲಿಲ್ಲ. ಆದರೆ ಅಜಿಂಕ್ಯ ರಹಾನೆ ಅದ್ಭುತವಾಗಿ ಕರ್ತವ್ಯ ನಿಭಾಯಿಸಿದರು. ನಾವು ನಿರಾಳರಾಗಿ ನಮ್ಮ ನೈಜ ಆಟವನ್ನು ನೀಡುವತ್ತ ಗಮನಹರಿಸಿದೆವು" ಎಂದು ಚೇತೇಶ್ವರ್ ಪೂಜಾರ ಹೇಳಿಕೊಂಡಿದ್ದಾರೆ.
"ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಯುವ ಆಟಗಾರರು ನೀಡಿದ ಕೊಡುಗೆಯ ಕಾರಣದಿಂದ ತಿರುಗೇಟು ನೀಡಲು ಸಾಧ್ಯವಾಯಿತು. ಹಾಗಾಗಿ ಇದು ಏಕವ್ಯಕ್ತಿ ಪ್ರದರ್ಶನವಾಗಿರಲ್ಲ. ತಂಡದ ಪ್ರತಿಯಿಬ್ಬ ಆಟಗೃಆರು ಒಂದಲ್ಲಾ ಒಂದು ಸದರ್ಭದಲ್ಲಿ ತಂಡಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅವರೆಲ್ಲರೂ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು" ಎಂದಿದ್ದಾರೆ ಚೇತೇಶ್ವರ್ ಪೂಜಾರ.
"ಎಲ್ಲಾ ಯುವ ಆಟಗಾರರು ಕೂಡ ಜವಾಬ್ಧಾರಿಯನ್ನು ತೆಗೆದುಕೊಂಡರು. ಆದರೆ ಅವರೆಲ್ಲರಿಗೂ ತಮ್ಮ ನೈಜ ಆಟವನ್ನು ನೀಡಲು ಹೇಳಲಾಗಿತ್ತು. ತಮ್ಮ ಆಟದ ಮೇಲೆ ನಂಬಿಕೆಯನ್ನು ಹೊಂದಿದ್ದರು ಹಾಗೂ ತಮ್ಮ ಮೇಲೆ ತಾವು ಒತ್ತಡವನ್ನು ಹೇರಿಕೊಳ್ಳಲಿಲ್ಲ" ಎಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಗೆಲುವಿನ ಬಗ್ಗೆ ಚೇತೇಶ್ವರ್ ಪೂಜಾರ ಪ್ರತಿಕ್ರಿಯೆ ನೀಡಿದ್ದಾರೆ.