
ನವದೆಹಲಿ, ಜುಲೈ 15: ಐಸಿಸಿ ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ಎದುರಿನ ನ್ಯೂಜಿಲೆಂಡ್ ಸೋಲಿಗೆ 'ಇದೊಂಥರಾ ಅನ್ಯಾಯ' ಎಂದು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್ ವೇಲ್ಸ್ನಲ್ಲಿ ಭಾನುವಾರ (ಜುಲೈ 14) ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
'ನನ್ನ ಪ್ರಕಾರ ಫೈನಲ್ನಲ್ಲಿ ಯಾರೂ ಸೋತಿಲ್ಲ. ಎರಡೂ ತಂಡಗಳೂ ಟ್ರೋಫಿ ಹಂಚಿಕೊಂಡಿವೆ. ಆದರೆ ವಿಜೇತ ತಂಡವನ್ನು ಐಸಿಸಿ ನಿರ್ಧರಿಸಿತು. ಅದಕ್ಕಾಗಿ ಉಪಾಯವನ್ನು ಬಳಸಿತು. ವಿಶ್ವಕಪ್ ಫೈನಲ್ನಲ್ಲಿ ಹೀಗೆ ಹಿಂದೆಂದೂ ನಡೆದಿಲ್ಲ. ಹೀಗಾಗಿ ನನಗೆ ಈ ನಿಯಮದ ಬಗ್ಗೆ ಖಚಿತವಿಲ್ಲ.' ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆಯೋಜಿಸಿದ್ದ ಕ್ರೀಡಾ ಸಮಾವೇಶದಲ್ಲಿ ಪೂಜಾರ ಹೇಳಿಕೊಂಡಿದ್ದಾರೆ.
ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ 22 ಬೌಂಡರಿ ಮತ್ತು 2 ಸಿಕ್ಸರ್ಗಳನ್ನು ಬಾರಿಸಿತ್ತು. ನ್ಯೂಜಿಲೆಂಡಗ 16 ಬೌಂಡರಿಗಳನ್ನು ಸಿಡಿಸಿತ್ತು. ರೋಚಕ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ (241 ರನ್) ಸಾಧಿಸಿದ್ದವು. ಸೂಪರ್ ಓವರ್ನಲ್ಲೂ ಎರಡೂ ತಂಡಗಳು 15 ರನ್ಗಳಿಂದ ಪಂದ್ಯ ಟೈ ಮಾಡಿಕೊಂಡಿದ್ದರಿಂದ ಬೌಂಡರಿ ಸಂಖ್ಯೆಗಳನ್ನು ಪರಿಗಣಿಸಿ ಇಂಗ್ಲೆಂಡನ್ನು ವಿಜಯಿ ಎಂದು ಘೋಷಿಸಲಾಗಿತ್ತು.
'ಆದರೆ ಈ ನಿಯಮ ನ್ಯೂಜಿಲೆಂಡ್ ಪಾಲಿಗೆ ಕೊಂಚ ಅನ್ಯಾಯ ಮಾಡಿದೆ. ಯಾಕೆಂದರೆ ನ್ಯೂಜಿಲೆಂಡ್ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿತ್ತು. ಈ ಪಂದ್ಯ ಪ್ರತೀ ವಿಶ್ವಕಪ್ ವೇಳೆಯೂ ಖಂಡಿತಾ ನೆನಪಾಗಲಿದೆ.' ಎಂದು ಪೂಜಾರ ಹೇಳಿದ್ದಾರೆ. ಪಂದ್ಯಾಟದಲ್ಲಿ ಬಿಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಸೋತು ನಿರಾಸೆ ಅನುಭವಿಸಿತ್ತು.