
ಟೀಮ್ ಇಂಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ದೆಹಲಿಯಲ್ಲಿ ನಡೆಯಲಿರುವ ಕಾರಣ ಭಾರತ ತಂಡದ ಆಟಗಾರರು ದೆಹಲಿಗೆ ಪ್ರಯಾಣ ಬೆಳೆಸಿದ್ದು ಈ ಸಂದರ್ಭದಲ್ಲಿ ಪ್ರಧಾನಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯ ಬಳಿಕ ಟ್ವಿಟ್ಟರ್ನಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರನಿಗೆ ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.
ಚೇತೇಶ್ವರ್ ಪೂಜಾರ ದೆಹಲಿಯಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ 100ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಈ ವಿಶೇಷ ಮೈಲಿಗಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ನಲ್ಲಿ ಶುಭಾಶಯ ಕೋರಿದ್ದಾರೆ.
ಪ್ರಧಾನಿಯನ್ನು ಪತ್ನಿಯ ಜೊತೆಗೆ ಭೇಟಿಯಾದ ಬಳಿಕ ಚೇತೇಶ್ವರ್ ಪೂಜಾರ ಟ್ವಿಟ್ಟರ್ನಲ್ಲಿ ಫೋಟೊ ಹಂಚಿಕೊಂಡು ವಿಶೇಷ ಕ್ಷಣದ ಬಗ್ಗೆ ಬರೆದುಕೊಂಡಿದ್ದಾರೆ. "ಪ್ರಧಾನಿಯನ್ನು ಭೇಟಿಯಾಗಿದ್ದು ವಿಶೇಷವಾದ ಗೌರವವಾಗಿದೆ. 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಮಾತುಕತೆ ಪ್ರೋತ್ಸಾಹವನ್ನು ನಾನು ಯಾವಾಗಲೂ ಸ್ಮರಿಸುತ್ತೇನೆ" ಎಂದು ಚೇತೇಶ್ವರ್ ಪೂಜಾರ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರಧಾನ ಮಂತ್ರಿ ನರೇದ್ರ ಮೋದಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದು "ಇಂದು ನಿಮ್ಮನ್ನು ಹಾಗೂ ಪೂಜಾ ಅವರನ್ನು ಭೇಟಿಯಾಗಿದ್ದು ಖುಷಿ ನೀಡಿದೆ. ನಿಮ್ಮ 100ನೇ ಟೆಸ್ಟ್ ಪಂದ್ಯಕ್ಕೆ ಹಾಗೂ ವೃತ್ತಿ ಜೀವನಕ್ಕೆ ಶುಭಹಾರೈಸುತ್ತೇನೆ" ಎಂದಿದ್ದಾರೆ ಪ್ರಧಾನಿ ಮೋದಿ.
ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್, ಸೌರವ್ ಗಂಗೂಲಿ, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಇಶಾಂತ್ ಶರ್ಮಾ, ವಿರಾಟ್ ಕೊಹ್ಲಿ ಜೊತೆಗೆ 100ನೇ ಟೆಸ್ಟ್ ಪಂದ್ಯವನ್ನಾಡಿದ 13ನೇ ಔಆರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ ಚೇತೇಶ್ವರ್ ಪೂಜಾರ