
ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಭಾರತಕ್ಕೆ ಮರಳಿದೆ. ಟೀಮ್ ಇಂಡಿಯಾ ಸದಸ್ಯರು ಈಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸಾಧಿಸಿದ ವಿಜಯದ ಕುರಿತಾಗ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಶಾರ್ದೂಲ್ ಠಾಕೂರ್ ಮಾತನಾಡಿದ್ದು ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಬಗ್ಗೆ ಮನಃಪೂರ್ವಕವಾಗಿ ಶ್ಲಾಘಿಸಿದ್ದಾರೆ.
ಗಾಬಾ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಮಡಿಯಾದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮ್ಯಾರಥಾನ್ ಇನ್ನಿಂಗ್ಸ್ ಆಡಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 211 ಎಸೆತಗಳನ್ನು ಎದುರಿಸಿ 56 ರನ್ ಗಳ ಕೊಡುಗೆಯನ್ನು ನೀಡಿದ್ದರು ಪೂಜಾರ. ಈ ಕೊಡುಗೆ ಆಸ್ಟ್ರೇಲಿಯಾ ಗಾಬಾ ಅಂಗಳದಲ್ಲಿ 32 ವರ್ಷಗಳ ನಂತರ ಸೋಲು ಕಾಣಲು ಕಾರಣವಾಗಿದ್ದಲ್ಲದೆ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆಲ್ಲಲು ಕಾರಣವಾಗಿತ್ತು.
ಈ ಪ್ರದರ್ಶನದ ಬಗ್ಗೆ ಶಾರ್ದೂಲ್ ಠಾಕೈರ್ ಮಾತನಾಡಿ "ನನ್ನ ಪ್ರಕಾರ ಪೂಜಾರ ಗಾಬಾ ಅಂಗಳದಲ್ಲಿ ಅಕ್ಷರಶಃ ಸೈನಿಕಂತೆ ಹೋರಾಟವನ್ನು ನಡೆಸಿದರು. ಡ್ರೆಸ್ಸಿಂಗ್ ರೂಮ್ನಲ್ಲಿಯೂ ಕೂಡ ಆತ ಹೊಡೆತಗಳನ್ನು ತಿಂದರೂ ಆತ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾನೆ ಎಂದು ಭಾವಿಸಲಿಲ್ಲ. ಆತ ಆ ಹೊಡೆತಗಳನ್ನು ತಿನ್ನಲ್ಲು ಸಿದ್ಧನಾಗಿದ್ದ" ಎಂದು ಶಾರ್ದೂಲ್ ಠಾಕೂರ್ ಹೇಳಿದ್ದಾರೆ.
"ಆತ ತನ್ನ ರಕ್ಷಣಾತ್ಮ ಆಟದಲ್ಲಿ ಅದ್ಭುತವಾಗಿದ್ದಾರೆ. ಕೆಲ ಸಂದರ್ಭಗಳಲ್ಲಿ ಟಿವಿಯಲ್ಲಿ ನೋಡುವಾಗ ಉತ್ತಮವಾಗಿ ಕಾಣಿಸದಿರಬಹುದು, ಆದರೆ ತನ್ನ ಜವಾಬ್ಧಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರು. ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ನಮ್ಮಲ್ಲಿ ಯಾವುದೇ ಆತಂಕಗಳು ಮೂಡುವಂತೆ ಮಾಡಲಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಗಾಬಾ ಅಂಗಳದಲ್ಲಿ ಭಾರತದ ಗೆಲುವಿನಲ್ಲಿ ಶಾರ್ದೂಲ್ ಠಾಕೂರ್ ಪಾತ್ರವೂ ನಿರ್ಣಾಯಕವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ನಿರ್ಣಾಯಕ 67 ರನ್ಗಳನ್ನು ಬ್ಯಾಟ್ ಮೂಲಕ ಸಿಡಿಸಿದ ಠಾಕೂರ್, ಪಂದ್ಯದ ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು 7 ವಿಕೆಟ್ ಕಿತ್ತು ಮಿಂಚಿದರು.