ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ಮಾಡು ಇಲ್ಲವೇ ಮಡಿ ಪಂದ್ಯವನ್ನು ಡಿಸೆಂಬರ್ 26 ರಿಂದ ಆಡಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ 1-1ರಲ್ಲಿ ಸಮಬಲವಾಗಿದ್ದು, ಮೆಲ್ಬೋರ್ನ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿ ಉಭಯ ತಂಡಗಳಿವೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕಳಪೆ ಫಾರ್ಮ್ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆದರೆ ಚೇತೇಶ್ವರ ಪೂಜಾರ ಭಾರತ ಸೋಲಿಗೆ ನಿಜವಾದ ದೌರ್ಬಲ್ಯವನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದ ಕ್ಲಾಸಿಕ್ ಬ್ಯಾಟರ್ ಚೇತೇಶ್ವರ ಪೂಜಾರ ಈ ಬಾರಿ ಹೊರಗುಳಿದಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕ್ರಿಕೆಟ್ ಕಾಮೆಂಟರ್ ಆಗಿರುವ ಚೇತೇಶ್ವರ ಪೂಜಾರ ಭಾರತದ ಕಳಪೆ ಪ್ರದರ್ಶನದ ಬಗ್ಗೆ ವಿವರಣೆ ನೀಡಿದ್ದಾರೆ. ಭಾರತ ತಂಡದ ಬೌಲಿಂಗ್ ಅನ್ನು ದೌರ್ಬಲ್ಯ ಎಂದು ಪೂಜಾರ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಮೆಲ್ಬೋರ್ನ್ಗೆ ಬಂದಿಳಿದಿರುವ ಭಾರತ ತಂಡ ಯಾವ ರೀತಿಯ ತಯಾರಿ ನಡೆಸಲಿದೆ ಎಂಬುದು ಪ್ರಶ್ನೆಯಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಚೇತೇಶ್ವರ ಪೂಜಾರ, 'ನನ್ನ ದೊಡ್ಡ ಪ್ರಶ್ನೆ ಮತ್ತು ಆತಂಕಕ್ಕೆ ಕಾರಣವೆಂದರೆ ಭಾರತ ತಂಡದ ಬೌಲಿಂಗ್ ಸ್ವಲ್ಪ ದುರ್ಬಲವಾಗಿದೆ. ಟಾಪ್ ಐದು ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಬ್ಯಾಟಿಂಗ್ ಸ್ವಲ್ಪ ಉತ್ತಮವಾಗಿದೆ. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಾದ ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಕೂಡ ಬ್ಯಾಟಿಂಗ್ನಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ದುರ್ಬಲವಾಗಿರುವುದರಿಂದ ತಂಡದ ಸಂಯೋಜನೆ ಹೇಗಿರುತ್ತದೆ ಎಂದು ಪೂಜಾರ ಹೇಳಿದ್ದಾರೆ. 'ತಂಡ ಸಂಯೋಜನೆ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಆಡುವ ಹನ್ನೊಂದರ ಬಳಗದಿಂದ ನಿತೀಶ್ ಅವರನ್ನು ಬಿಡಲು ಸಾಧ್ಯವಾಗದಿದ್ದರೆ, ಜಡೇಜಾವನ್ನು ಬಿಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ತಂಡದ ಸಂಯೋಜನೆ ಹೇಗೆ?. ರವಿಚಂದ್ರನ್ ಅಶ್ವಿನ್ ಅವರು ನಿವೃತ್ತರಾಗಿದ್ದು, ಇಬ್ಬರು ಸ್ಪಿನ್ನರ್ಗಳೊಂದಿಗೆ ನಾವು ಮೆಲ್ಬೋರ್ನ್ ಟೆಸ್ಟ್ ಆಡಲಿದ್ದೇವೆ ಎಂದುಕೊಂಡಿದ್ದೇನೆ. ಹೀಗಾಗಿ ಭಾರತ ತಂಡದ ಬೌಲಿಂಗ್ ಅನ್ನು ಹೇಗೆ ಬಲಪಡಿಸುವುದು? ಏಕೆಂದರೆ ಮೂವರೂ ವೇಗದ ಬೌಲರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಾಲ್ಕು ಮತ್ತು ಐದನೇ ಬೌಲರ್ಗಳಾಗಿ ನಿತೀಶ್ ಮತ್ತು ಜಡೇಜಾರಿಂದ ಅವರಿಗೆ ಸಾಕಷ್ಟು ಬೆಂಬಲ ಸಿಗುತ್ತಿಲ್ಲ. ಇವೆರಡನ್ನು ಒಟ್ಟಿಗೆ ನೋಡಿದರೆ ಬೌಲಿಂಗ್ ತುಂಬಾ ಚೆನ್ನಾಗಿ ಕಾಣುವುದಿಲ್ಲ ಎಂದು ಚೇತೇಶ್ವರ್ ಪೂಜಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದರೆ ಭಾರತ ಎರಡೂ ಇನ್ನಿಂಗ್ಸ್ಗಳಲ್ಲಿ 20 ವಿಕೆಟ್ಗಳನ್ನು ಕಬಳಿಸಬೇಕು. ಆದರೆ ಸದ್ಯದ ಬೌಲಿಂಗ್ ವಿಭಾಗ ನೋಡಿದರೆ, 20 ವಿಕೆಟ್ ಪಡೆಯುವ ನಮ್ಮ ಸಾಮರ್ಥ್ಯ ಚೆನ್ನಾಗಿಲ್ಲ. ನಮ್ಮ ಇತರ ಬೌಲರ್ಗಳು ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಬೌಲಿಂಗ್ ವಿಭಾಗ ಸುಧಾರಿಸಬೇಕಾಗಿದ್ದು, ಹೇಗೆ ತಂಡದ ಸಂಯೋಜನೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.