ಬೆಂಗಳೂರಿನ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕರ ಸ್ಟ್ಯಾಂಡ್ನಲ್ಲಿ ಇನ್ನು ಮುಂದೆ ಇಬ್ಬರು ದಿಗ್ಗಜ ಆಟಗಾರರ ಹೆಸರುಗಳು ಕಾಣಲಿವೆ. ಟೀಮ್ ಇಂಡಿಯಾದ ಪರ ಹಲವು ವರ್ಷಗಳ ಕಾಲ ಆಡಿ ದೇಶಕ್ಕೆ ಕೀರ್ತಿ ತಂದ ರಾಹುಲ್ ದ್ರಾವಿಡ್ ಹಾಗೂ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಹೆಸರುಗಳನ್ನು ಚಿನ್ನಸ್ವಾಮಿ ಸ್ಟ್ಯಾಂಡ್ಗೆ ಇಡಲಾಗಿದೆ. ಅಲ್ಲದೆ ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಹೆಸರಿನಲ್ಲೂ ಸ್ಟ್ಯಾಂಡ್ ಕಾಣಿಸಿಕೊಳ್ಳಲಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಡಿ ಬೆಳೆದ ಆಟಗಾರರಿಗೆ ಇದು ಸಂದ ದೊಡ್ಡ ಗೌರವವಾಗಿದೆ. ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಶಾಂತಾ ರಂಗಸ್ವಾಮಿ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ವಿಶೇಷ ಗೌರವ ನೀಡಿದೆ.

ಈ ಮೂವರು ಆಟಗಾರರು ಕರ್ನಾಟಕವನ್ನು ಪ್ರತಿನಿಧಿಸಿ ಕೀರ್ತಿ ತಂದಿದ್ದರು. ಅಲ್ಲದೆ ದೇಶದ ಪರ ದಶಕಗಳ ಕಾಲ ಆಡಿ ಅಭಿಮಾನಿಗಳನ್ನು ರಂಜಿಸಿದ್ದರು. ಈ ಆಟಗಾರರು ಆಟದ ಘನತೆಯನ್ನು ಎತ್ತಿ ಹಿಡಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅನಿಲ್ ಕುಂಬ್ಳೆ ಭಾರತದ ಪರ ಅತಿ ಹೆಚ್ಚು ವಿಕೆಟ್ಗಳನ್ನ ಕಬಳಿಸಿದ ಬೌಲರ್ ಎಂಬ ಹಿರಿಮೆ ಹೊಂದಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ದ್ರಾವಿಡ್, ಸಚಿನ್ ತೆಂಡೂಲ್ಕರ್ ಅವರ ಬಳಿಕ ಟೆಸ್ಟ್ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ.
ಕಾರ್ಯಕ್ರಮದಲ್ಲಿ ಹಾಜರಿದ್ದ ರಾಹುಲ್ ದ್ರಾವಿಡ್ ಭಾವುಕರಾದರು. ಇವರು ಈ ವೇಳೆ ಮಾತನಾಡಿ ತಮ್ಮ ತಂದೆಯ ಜೊತೆಗೆ ಟೆಸ್ಟ್, ರಣಜಿ ಪಂದ್ಯಗಳನ್ನು ನೋಡಲು ಬರುತ್ತಿದ್ದ ಸಮಯವನ್ನು ನೆನಪಿಸಿಕೊಂಡರು. ಅಲ್ಲದೆ ಈ ಮೈದಾನದ ಜೊತೆಗೆ ತಮ್ಮ ಬಾಂಧವ್ಯವನ್ನು ಅವರು ಹಂಚಿಕೊಂಡಿದ್ದಾರೆ. ಈ ಮೈದಾನ ಪ್ರೇಕ್ಷಕರ ಗ್ಯಾಲರಿಗೆ ತಮ್ಮ ಹೆಸರು ಇಟ್ಟಿದ್ದು ನನಗೆ ಖುಷಿ ಇದೆ. ನಮ್ಮ ತಂದೆಗೆ ಈಗ ಹೆಮ್ಮೆ ಆಗುತ್ತದೆ ಎಂದು ಭಾವುಕರದರು. ವೆಂಕಟೇಶ್ ಪ್ರಸಾದ್ ಅವರ ಸಮಿತಿ ನನ್ನ ಹೆಸರಿನಲ್ಲಿ ಒಂದು ಸ್ಟ್ಯಾಂಡ್ಗೆ ನಾಮಕರಣ ಮಾಡಿದಕ್ಕೆ ಕೃತಜ್ಞ ಎಂದು ತಿಳಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಅನಿಲ್ ಕುಂಬ್ಳೆ ಸಹ, ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ತೆರೆದಿಟ್ಟರು. ಅಲ್ಲದೆ ಈಗ ಪೆವಿಲಿಯನ್ ಮೇಲೆ ನನ್ನ ಹೆಸರು ನೋಡುವುದು ಹೆಮ್ಮೆಯ ಸಂಗತಿಯಾಗಿದೆ. ಚಿನ್ನಸ್ವಾಮಿ ಮೈದಾನ ಭಾರತೀಯ ಕ್ರಿಕೆಟ್ ರಂಗಕ್ಕೆ ನೀಡಿರುವ ಕೊಡುಗೆಯನ್ನು ಸಹ ಕುಂಬ್ಳೆ ನೆನೆದರು.