ಬೆಂಗಳೂರು, ಏ. 30: ಈ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿ ಮಿಂಚುತ್ತಿರುವ ವೆಸ್ಟ್ ಇಂಡೀಸ್ ನ ಬೀಸುಗೈ ದಾಂಡಿಗ ಕ್ರಿಸ್ ಗೇಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರುದ್ಧ ತನ್ನೊಳಗಿದ್ದ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಆಟಗಾರರ ಹರಾಜಿನ ವೇಳೆ ತಂಡದಲ್ಲಿದ್ದ ಆಟಗಾರನನ್ನು ಕಡೆಗಣಿಸಿ ಈಗ ಸೋಲಿನ ಸುಳಿಯಲ್ಲಿ ಸಿಲುಕಿರುವ ಆರ್ಸಿಬಿಗೆ ಗೇಲ್ ಮಾತುಗಳಿಂದಾಗಿ ಗಾಯಕ್ಕೆ ಉಪ್ಪು ಸವರಿದಂತಾಗಿದೆ.
ಉಳಿಸಿಕೊಳ್ಳುತ್ತೇನೆಂದು ಕೈ ಕೊಟ್ಟಿತು!
'ಆಟಗಾರರ ಹರಾಜು ಕೊನೆ ಸಂದರ್ಭ ನನಗೆ ನಿಜಕ್ಕೂ ಬೇಸರವಾಯಿತು. ಆರ್ಸಿಬಿ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿತು. ತಂಡದಲ್ಲಿ ಉಳಿಸಿಕೊಳ್ಳಲಾಗುವುದು ಎಂದೂ ಹೇಳಿತು. ಆದರೆ ಕೊನೇ ಗಳಿಗೆಯಲ್ಲಿ ಕೈಬಿಟ್ಟಿತು' ಎಂದು ಗೇಲ್ ಬೇಸರ ತೋರಿಕೊಂಡರು.
ಕಳೆದ ಐಪಿಎಲ್ನಲ್ಲಿ ಆರ್ಸಿಬಿ ತಂಡಕ್ಕೆ ಬಲ ತುಂಬಿದ್ದ ಕ್ರಿಸ್ ಗೇಮ್ ಅವರನ್ನು ಈ ಐಪಿಎಲ್ ಆವೃತ್ತಿ ಆರಂಭಕ್ಕೂ ಮುನ್ನ ಆಟಗಾರರ ಹರಾಜು ಪ್ರಕ್ರಿಯೆ ವೇಳೆ ಆರ್ಸಿಬಿ ಫ್ರಾಂಚೈಸಿ ಖರೀದಿಸಿರಲಿಲ್ಲ. ಈ ಸಂದರ್ಭ ಗೇಲ್ ಸಹಜವಾಗೇ ಅವಮಾನಕ್ಕೀಡಾಗಿದ್ದರು.
ಕೊನೇ ಸುತ್ತಿನಲ್ಲಿ ಖರೀದಿ
ಆದರೆ ಕೊನೇಯ ಸುತ್ತಿನ ಹರಾಜಿನಲ್ಲಿ ಗೇಲ್ ಅವರನ್ನು ಪ್ರೀತಿ ಜಿಂಟಾ ಮಾಲೀಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಖರೀದಿಸುವ ಮೂಲಕ ಚುಟುಕು ಕ್ರಿಕೆಟ್ ನ ಪ್ರತಿಭಾವಂತ ಬ್ಯಾಟ್ಸ್ಮನ್ ಗೇಲ್ ಗೆ ಅವಕಾಶವನ್ನು ನೀಡಿತ್ತು. ಈ ಸಂದರ್ಭವನ್ನು ಸ್ಮರಿಸಿಕೊಂಡ ಗೇಲ್ ಆರ್ಸಿಬಿ ಬಗ್ಗೆ ನಿರಾಸೆ ವ್ಯಕ್ತಪಡಿಸಿದರು.
'ಈ ವಿಚಾರವಾಗಿ ನಾನು ಯಾರೊಂದಿಗೂ ಕಾದಾಟಕ್ಕಿಳಿಯಲು ಬಯಸಲಾರೆ. ಆದರೆ ನನ್ನಿಂದ ಸಾಧನೆಯಾಗಿರುವುದಕ್ಕೆ ಖುಷಿಯಿದೆ. ಯಾಕೆಂದರೆ ಅಂಕಿ ಅಂಶಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ. ಅಂಕಿ ಅಂಶಗಳು ಹೇಳುವಂತೆ 21 ಶತಕಗಳು, ಹೆಚ್ಚಿನ ಸಂಖ್ಯೆಯ ಸಿಕ್ಸರ್ ಗಳು ನನ್ನ ಬ್ಯಾಟ್ ನಿಂದಲೇ ಸಿಡಿದಿವೆ. ನಾನು ಬ್ಯಾಟಿಂಗ್ ಕಿಂಗ್ ಎನ್ನುವುದಕ್ಕೆ ಇದೇ ಸಾಕ್ಷಿ' ಎಂದು ಗೇಲ್ ಹೇಳಿದರು.
ಯಾರೂ ಆರಿಸದ್ದು ಅಚ್ಚರಿಯಾಯ್ತು
'ಹರಾಜಿನ ವೇಳೆ ನನ್ನನ್ನು ಯಾವುದೇ ತಂಡವೂ ಆರಿಸದ ಬಗ್ಗೆ ನನಗೆ ಬಹಳ ಅಚ್ಚರಿಯಾಯಿತು. ಆ ಸಂದರ್ಭ ನನಗೇನೂ ಮಾಡಲೂ ತೋಚಲಿಲ್ಲ. ಯಾಕೆ ಹೀಗಾಯಿತೋ, ತೆರೆ ಮರೆಯ ಕತೆ ಏನೇನಾಗಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ಮೂಲೆಗುಂಪಾಗಿದ್ದೆ' ಎಂದು ಗೇಲ್ ಹೇಳಿದರು.
For a reason... #LivePunjabiPlayPunjabi #KXIPvSRH pic.twitter.com/CSP8w0ELCm
— Kings XI Punjab (@lionsdenkxip) April 19, 2018
ನನಗಿದು ಸುವರ್ಣಾವಕಾಶ!
'ಇರಲಿ, ಆಗಿದ್ದಕ್ಕೇನೂ ಬೇಜಾರಿಲ್ಲ. ನನ್ನನ್ನು ಪಂಜಾಬ್ ಖರೀದಿಸಿ ಅವಕಾಶ ನೀಡಿದೆ. ಅವಕಾಶ ನೀಡಿದ ಪಂಜಾಬ್ ಗೆ ಶ್ರಮಿಸಲು ನನಗಿದು ಸುವರ್ಣಾವಕಾಶ' ಎನ್ನುವ ಮೂಲಕ ಸೋಲಿನ ಅಂಚಿನಲ್ಲೇ ಒದ್ದಾಡುತ್ತಿರುವ ಆರ್ಸಿಬಿ ತಂಡವನ್ನು ಗೇಲ್ ಪರೋಕ್ಷವಾಗಿ ಗೇಲಿ ಮಾಡಿದ್ದಾರೆ.