ಜುಲೈ 9 ಮಂಗಳವಾರ, 2024ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ಸ್ಟಾರ್ ಬೌಲರ್ ಸೋಮವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಸಿಎಂ ಯೋಗಿ ಟಿ20 ವಿಶ್ವಕಪ್ ಗೆಲುವಿನ ಹೀರೋ ಆದ ಬೌಲರ್ನನ್ನು ಶ್ಲಾಘಿಸಿದ್ದಾರೆ. ಟೀಮ್ ಇಂಡಿಯಾದ ಚೈನಾಮ್ಯಾನ್ ಬೌಲರ್ ಖ್ಯಾತಿಯ ಸ್ಪಿನ್ನರ್ ಕುಲದೀಪ್ ಯಾದವ್ ಅವರು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ.

ಸಿಎಂ ಯೋಗಿ ಅವರ ಭೇಟಿಗೂ ಮುನ್ನ ಕಾನ್ಪುರ ತಲುಪಿದ ಕುಲದೀಪ್ ಯಾದವ್ ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಇದಾದ ನಂತರ ಲಕ್ನೋದಲ್ಲಿರುವ ಸಿಎಂ ಯೋಗಿ ಅವರ ನಿವಾಸಕ್ಕೆ ಭೇಟಿ ಮಾಡಿದ ಕುಲದೀಪ್ ಯಾದವ್ ಅವರನ್ನು ಶ್ಲಾಘಿಸಿ ಸ್ಮರಣಿಕೆ ನೀಡಿ ಗೌರವಿಸಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕುಲದೀಪ್ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಯಾವುದೇ ರೀತಿಯ ಸಹಾಯ ಬೇಕಾದರೆ ರಾಜ್ಯ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸಿಎಂ ಯೋಗಿ ಭರವಸೆ ನೀಡಿದ್ದಾರೆ.
2024ರ ಟಿ20 ವಿಶ್ವಕಪ್ನಲ್ಲಿ ಉತ್ತರ ಪ್ರದೇಶದ ಮೂವರು ಆಟಗಾರರು ಭಾರತ ತಂಡದಲ್ಲಿ ಆಡುತ್ತಿದ್ದರು. ಆದರೆ ಕುಲದೀಪ್ ಯಾದವ್ ಮಾತ್ರ ರಣಜಿ ಟ್ರೋಫಿಯಲ್ಲಿ ಯುಪಿಯನ್ನು ಪ್ರತಿನಿಧಿಸುತ್ತಾರೆ.
ಕಾನ್ಪುರದ ನಿವಾಸಿ ಮತ್ತು ಉತ್ತರ ಪ್ರದೇಶದ ರಣಜಿ ಟ್ರೋಫಿ ಸ್ಟಾರ್ ಆಟಗಾರ ಕುಲದೀಪ್ ಯಾದವ್ ಅವರಿಗೆ ಟಿ20 ವಿಶ್ವಕಪ್ನ ಮೊದಲ ಸುತ್ತಿನ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರದ ಐದು ಪಂದ್ಯಗಳಲ್ಲಿ ಕಣಕ್ಕೀಳಿದ ಕುಲದೀಪ್ ಒಟ್ಟು 10 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಕುಲದೀಪ್ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದರು. ತಮ್ಮ ನಾಲ್ಕು ಓವರ್ಗಳ ಕೋಟಾದಲ್ಲಿ 10 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಪಡೆದು ಸಂಭ್ರಮಿಸಿದ್ದರು. ಇದು 2024ರ ಟಿ20 ವಿಶ್ವಕಪ್ನಲ್ಲಿ ಕುಲದೀಪ್ ಅತ್ಯುತ್ತಮ ಪ್ರದರ್ಶನವಾಗಿತ್ತು. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಕುಲದೀಪ್ ಅವರ ಪ್ರದರ್ಶನದಿಂದಾಗಿ ಭಾರತ ಗೆದ್ದು ಬೀಗಿತ್ತು.
ಕುಲದೀಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆಯೂ ಮಾತನಾಡಿದರು. ಎಎನ್ಐ ಜೊತೆ ಮಾತನಾಡಿದ ಕುಲದೀಪ್, 'ನಾವು ತುಂಬಾ ಸಂತೋಷವಾಗಿದ್ದೇವೆ. ಇದಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಇಲ್ಲಿರುವ ನಮ್ಮ ಜನರನ್ನು ನೋಡುವುದೇ ದೊಡ್ಡ ಅನುಭವ.
ವಿಶ್ವಕಪ್ ತಂದಿರುವುದು ತುಂಬಾ ಖುಷಿ ತಂದಿದೆ. ಇದು ನಮಗಾಗಿ ಅಲ್ಲ, ನಮ್ಮ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲು ಸಂತೋಷವಾಯಿತು ಎಂದು ತಿಳಿಸಿದ್ದಾರೆ.