

ನವದೆಹಲಿ, ಜನವರಿ : ಟಿವಿ ಶೋವೊಂದರಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಕ್ಕೆ, ಕ್ರಿಕೆಟ್ ಸರಣಿಯಿಂದ ಅಮಾನತಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಅವರಿಗೆ ಗುರುವಾರ (ಜನವರಿ 24) ಸಂಜೆ ಶುಭ ಸುದ್ದಿ ಸಿಕ್ಕಿದೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಮೇಲಿನ ನಿಷೇಧ ಆದೇಶವನ್ನು ಹಿಂಪಡೆದಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಆಡಳಿತಗಾರರ ಸಮಿತಿ(ಸಿಒಎ) ಹೇಳಿದೆ.
ಈ ಪ್ರಕರಣದ ತನಿಖೆ ನಡೆಸಲು ಹೊಸ ಒಂಬುಡ್ಸ್ ಮನ್ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿದ್ದು, ಫೆಬ್ರವರಿ 05ರ ತನಕ ವಿಚಾರಣೆ ಮುಂದೂಡಲ್ಪಟ್ಟಿದೆ. ಹೀಗಾಗಿ ಅಮಿಕ್ಯೂಸ್ ಕ್ಯೂರಿ ಪಿಎಸ್ ನರಸಿಂಹ ಅವರ ಸಲಹೆ ಮೇರೆಗೆ ಇಬ್ಬರು ಆಟಗಾರರ ಮೇಲಿನ ನಿಷೇಧವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಸಿಒಎ ಹೇಳಿದೆ.
ಬಾಲಿವುಡ್ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರ ನಡೆಸಿಕೊಡುವ "ಕಾಫಿ ವಿತ್ ಕರಣ್" ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಪಾಂಡ್ಯ ಮತ್ತು ರಾಹುಲ್,ಪ್ರಶ್ನೆಯೊಂದಕ್ಕೆ ಉತ್ತರಿಸಿ ಮಹಿಳೆಯರ ಕುರಿತಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದವು, ಬಿಸಿಸಿಐ ಕೂಡಾ ಇಬ್ಬರನ್ನು ಏಕದಿನ ಪಂದ್ಯ ಆಡದಂತೆ ನಿಷೇಧ ಹೇರಿದೆ. ನ್ಯೂಜಿಲೆಂಡ್ ಸರಣಿಗೂ ಇಬ್ಬರು ಆಯ್ಕೆ ಮಾಡಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಅವರು ಈ ಶೋನಲ್ಲಿ ನಡೆದ ಮಾತುಕತೆ ಎಲ್ಲೆ ಮೀರಿದ್ದರೆ ಕ್ಷಮಿಸಿ ಎಂದಿದ್ದಾರೆ. ಈ ಘಟನೆಯಿಂದಾದ ಪರಿಣಾಮ ಕೆಲ ದಿನಗಳ ಕಾಲ ನಿದ್ದೆ ಮಾಡಿಲ್ಲ. ಘಟಿಸಿ ಹೋದ ತಪ್ಪನ್ನು ತಿದ್ದಲು ಸಾಧ್ಯವಿಲ್ಲ. ಈ ಎಪಿಸೋಡಿನಲ್ಲಿ ಆದ ಪ್ರಮಾದದ ಹೊಣೆ ನಾನೇ ಹೊರುತ್ತೇನೆ. ಇದು ನನ್ನ ವೇದಿಕೆ ಇಲ್ಲಿ ನಡೆದಿದ್ದಕ್ಕೆ ನಾನೆ ಹೊಣೆ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.