
ಮುಂಬೈ, ಜೂನ್ 22: ಐಸಿಸಿ ಚಾಂಪಿಯನ್ಸ್ ಟ್ರೋಫಿ ಬದಲು ವಿಶ್ವ ಟಿ 20 ಆಡಿಸುವ ವಿಚಾರದ ಬಗ್ಗೆ ತನಗೆ ಯಾವುದೇ ಮಾಹಿತಿ ನೀಡದೆ ಇರುವುದಕ್ಕೆ ಸುಪ್ರೀಂ ಕೋರ್ಟ್ ನೇಮಿಸಿರುವ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಬಿಸಿಸಿಐ ವಿರುದ್ಧ ಕಿಡಿಕಾರಿದೆ.
ಅಲ್ಲದೆ, ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ಇತ್ತೀಚೆಗೆ ತಮ್ಮ ಕಾರ್ಯನಿರ್ವಾಹಕ ಸಹಾಯಕರ ಜತೆ ಭೂತಾನ್ಗೆ ಭೇಟಿ ನೀಡಿದ್ದನ್ನೂ ಸಿಒಎ ಪ್ರಶ್ನಿಸಿದೆ.
ಐಸಿಸಿ/ಎಸಿಸಿ ಸಭೆಗಳ ಹೊರತಾಗಿ ಕಾರ್ಯನಿರ್ವಾಹಕ ಸಹಾಯಕರ ವಿದೇಶ ಭೇಟಿಯನ್ನು ನಿರ್ದಿಷ್ಟವಾಗಿ ನಿರ್ಬಂಧಿಸಲಾಗಿದ್ದರೂ ಅವರನ್ನು ಕರೆದುಕೊಮಡು ಹೋಗಿರುವುದಕ್ಕೆ ಜುಲೈ 4ರ ಒಳಗೆ ವಿವರಣೆ ನೀಡುವಂತೆ ಚೌಧರಿ ಅವರಿಗೆ ಬರೆದಿರುವ ಪತ್ರದಲ್ಲಿ ಸಿಒಎ ಸೂಚಿಸಿದೆ.
ಭೂತಾನ್ನಲ್ಲಿ ಲಭ್ಯವಿರುವ ಕ್ರಿಕೆಟ್ ಉಪಕರಣಗಳು, ಮೈದಾನ ಮತ್ತು ಪಿಚ್ಗಳ ತಯಾರಿಕೆಗೆ ಅಗತ್ಯವಾದ ಸೂಕ್ತ ಮಣ್ಣಿನ ಲಭ್ಯತೆಯ ಕುರಿತು ಪರಿಶೀಲನೆ ನಡೆಸಲು ಚೌಧರಿ ಅವರು ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡ ಐಸಿಸಿ ಸಭೆಯಲ್ಲಿನ ವಿಚಾರಗಳನ್ನು ತನಗೆ ತಿಳಿಸದೆ ಇದ್ದಿದ್ದಕ್ಕೆ ಸಿಒಎ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಐಸಿಸಿ ಮತ್ತು ಎಸಿಸಿ ಸಭೆಗಳಿಗೆ ನಿಮ್ಮ ಪ್ರಯಾಣದ ವಿಚಾರದಲ್ಲಿ ಸಿಒಎ ಮಧ್ಯಪ್ರವೇಶ ಮಾಡುವುದಿಲ್ಲ. ಆದರೆ, ಈಗ ಉದ್ಭವಿಸಿರುವ ಪ್ರಶ್ನೆ ನೀವು ಸಭೆಯಲ್ಲಿ ಯಾವ ವಿಚಾರಗಳನ್ನು ಪ್ರಸ್ತಾಪಿಸುತ್ತೀರಿ ಎಂಬ ಬಗ್ಗೆ ಪೂರ್ವ ಮಾಹಿತಿ ನೀಡದೆ ಇರುವುದರ ಬಗ್ಗೆ ಮತ್ತು ಅಲ್ಲಿ ಚಚೆಗೆ ಒಳಗಾದ ವಿಚಾರಗಳ ಬಗ್ಗೆ ಸಿಒಎಗೆ ಮಾಹಿತಿ ನೀಡದೆ ಇರುವುದರ ಕುರಿತಾಗಿದೆ.

ಚಾಂಪಿಯನ್ಸ್ ಟ್ರೋಫಿ 2021ಅನ್ನು ರದ್ದುಗೊಳಿಸಿ ಅದರ ಬದಲು ಐಸಿಸಿ ವಿಶ್ವ ಟಿ20 ಆಡಿಸಲು ನಿರ್ಧಾರ ತೆಗೆದುಕೊಂಡ ವಿಚಾರದಲ್ಲಿ ಸಿಒಎಯನ್ನು ಸಂಪೂರ್ಣವಾಗಿ ಕತ್ತಲಲ್ಲಿ ಇರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಇದು ಬಿಸಿಸಿಐನ ಆಡಳಿತ ವೈಖರಿ ಮೇಲೆ ಕಣ್ಣಿಟ್ಟಿರುವ ಸಿಒಎ ಮತ್ತು ಬಿಸಿಸಿಐ ನಡುವಣ ಮುಸುಕಿನ ಗುದ್ದಾಟ ಮತ್ತೊಂದು ಹಂತಕ್ಕೆ ತಲುಪುವ ಸೂಚನೆ ನೀಡಿದೆ.
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು ಐಸಿಸಿ ಸಭೆಗಳಲ್ಲಿ ಬಿಸಿಸಿಐಅನ್ನು ಪ್ರತಿನಿಧಿಸುವ ಮುನ್ನ ಸಿಒಎಗೆ ನೇರವಾಗಿ ಮಾಹಿತಿ ನೀಡುತ್ತಾರೆ.
ಹಂಗಾಮಿ ಕಾರ್ಯದರ್ಶಿ ಚೌಧರಿ ಅವರ ವಿರುದ್ಧ ಸಿಒಎ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಸಿಒಎಗೆ ಮಾಹಿತಿ ನೀಡದೆಯೇ ಇರುವುದಕ್ಕೆ ಚೌಧರಿ ಅವರನ್ನು ಮಾತ್ರ ಏಕೆ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ? ಅವರು ಜೊಹ್ರಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಅಲ್ಲಿ ಏನಾಗುತ್ತಿದೆ ಎಂದು ಅವರನ್ನೇ ಕೇಳಬಹುದಿತ್ತು. ಇದರ ಅರ್ಥ ಅವರಿಗೆ ತಮ್ಮ ತಮ್ಮ ಪಾತ್ರಗಳ ಬಗ್ಗೆ ಸೂಕ್ತವಾಗಿ ವಿವರಿಸಿಲ್ಲ.
ಸಿಒಎಗೆ ತನ್ನ ಅಧಿಕಾರಗಳ ಬಗ್ಗೆ ಗೊಂದಲವಿದೆ. ಐಸಿಸಿ ಯಾವುದೇ ಮಹತ್ವದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಬಿಸಿಸಿಐ ಅಭಿಪ್ರಾಯಕ್ಕೆ ಕಾಯುವುದೇ ಇಲ್ಲ.
ಚಾಂಪಿಯನ್ಸ್ ಟ್ರೋಫಿಯ ಪರವಾಗಿ ಬಿಸಿಸಿಐನ ಅಧಿಕಾರಿಗಳು ಧ್ವನಿ ಎತ್ತಲು ಪ್ರಯತ್ನಿಸಿದಾಗ ಬಿಸಿಸಿಐಅನ್ನು ನಿಯಂತ್ರಿಸುತ್ತಿರುವ ಜನರು ಅದಕ್ಕೆ ಬೆಂಬಲ ನೀಡಲಿಲ್ಲ. ಈಗ ಸಿಒಎ ತಾನು ಐಸಿಸಿಯ ವಿಚಾರಗಳಲ್ಲಿಯೂ ಭಾಗಿಯಾಗಬೇಕೆಂದು ಬಯಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.