ನವದೆಹಲಿ, ಮೇ 05 : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮೇಲೆ ಒತ್ತಡ ಹೇರಲು ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಸಿಸಿಐಗೆ ಸುಪ್ರೀಂ ನೇಮಿತ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಚಾಟಿ ಬೀಸಿದೆ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಶೀಘ್ರವೇ ಪ್ರಕಟಿಸಿ ಎಂದು ಬಿಸಿಸಿಐಗೆ ಸಿಒಎ ಸೂಚಿಸಿದೆ.[ಐಸಿಸಿ-ಬಿಸಿಸಿಐ ಜಟಾಪಟಿ, ಭಾರತ ಚಾಂಪಿಯನ್ಸ್ ಟ್ರೋಫಿಗೆ ಇಲ್ಲ?]

ಎಲ್ಲಾ ದೇಶಗಳ ಕ್ರೀಡಾ ಮಂಡಳಿಗಳ ನಡುವೆ ಆದಾಯದ ಸಮಾನ ಹಂಚಿಕೆಯನ್ನು ಕಾಯ್ದುಕೊಳ್ಳಲು ನೂತನ ಆರ್ಥಿಕ ನೀತಿಯನ್ನು ಜಾರಿಮಾಡಲು ಐಸಿಸಿ ನಿರ್ಧರಿಸಿದೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]
ಆದರೆ, ಇದರಿಂದ ತನ್ನ ವರಮಾನ ಕಡಿಮೆಯಾಗಲಿದೆ ಎಂದು ತೀರ್ಮಾನಿಸಿ ಅದನ್ನು ವಿರೋಧಿಸುತ್ತಿರುವ ಬಿಸಿಸಿಐ, ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸಲು ಐಸಿಸಿ ನಿಗಧಿಪಡಿಸಿದ್ದ (ಏಪ್ರಿಲ್ 25) ಅಂತಿಮ ದಿನಾಂಕದೊಳಗೆ ಭಾರತ ತಂಡವನ್ನು ಪ್ರಕಟಿಸಲು ನಿರಾಕರಿಸಿತ್ತು.
'ತಂಡ ಪ್ರಕಟಿಸಲು ಅನುಸರಿಸುತ್ತಿರುವ ವಿಳಂಬ ಧೋರಣೆಯು ಭಾರತೀಯ ಕ್ರಿಕೆಟ್ ಹಾಗೂ ಆಟಗಾರರ ಬಗೆಗೆ ಕ್ರೀಡಾ ವಲಯದಲ್ಲಿ ಋಣಾತ್ಮಕ ಮನೋಭಾವವನ್ನು ಮೂಡಿಸಲಿದೆ' ಎಂದು ಬಿಸಿಸಿಐಗೆ ಬರೆದಿರುವ ತನ್ನ ಪತ್ರದಲ್ಲಿ ಸಿಒಎ ಉಲ್ಲೇಖಿಸಿದೆ. ಜೂನ್ 01ರಿಂದ ಇಂಗ್ಲೆಂಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ.