ಬೆಂಗಳೂರು, ಜುಲೈ 11: ಟೀಂ ಇಂಡಿಯಾದ ಮುಖ್ಯ ಕೋಚ್ ಆಯ್ಕೆ ಕುತೂಹಲ ಇನ್ನೂ ಮುಂದುವರೆದಿದೆ. ಸದ್ಯದ ಮಾಹಿತಿಯಂತೆ, ರವಿಶಾಸ್ತ್ರಿ ಅವರನ್ನು ಹಿಂದಿಕ್ಕಿ ವೀರೇಂದ್ರ ಸೆಹ್ವಾಗ್ ಅವರು ಮುಂದೆ ಬಂದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಅವರು ಭಾರತಕ್ಕೆ ಬಂದ ಬಳಿಕ ಕ್ರಿಕೆಟ್ ಸಲಹಾ ಸಮಿತಿ ಜತೆ ಸಭೆ ನಡೆಸಲಿದ್ದಾರೆ. ಕೊಹ್ಲಿ ಸಲಹೆ ಪಡೆದ ಬಳಿಕ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ತನ್ನ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಲಿದೆ.
ಈ ನಡುವೆ ಕೋಚ್ ಆಯ್ಕೆ ಪ್ರಕ್ರಿಯೆ ವಿಳಂಬ ಏಕೆ ಎಂದು ಸಲಹಾ ಸಮಿತಿಯನ್ನು ಸುಪ್ರೀಂಕೋರ್ಟ್ ನೇಮಿಸಿರುವ ಕ್ರಿಕೆಟ್ ಆಡಳಿತ ಮಂಡಳಿ(ಸಿಎಸಿ) ಪ್ರಶ್ನಿಸಿದೆ.

ಇದಾದ ಬಳಿಕ ಸೋರಿಕೆಯಾಗಿರುವ ಮಾಹಿತಿಯಂತೆ ಅಂತಿಮವಾಗಿ ಟಾಮ್ ಮೂಡಿ ಹಾಗೂ ವೀರೇಂದ್ರ ಸೆಹ್ವಾಗ್ ನಡುವೆ ಪೈಪೋಟಿ ಏರ್ಪಟ್ಟಿದ್ದು, ಕೊಹ್ಲಿ ಅವರು ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಸಲಹಾ ಸಮಿತಿಗೆ ತಿಳಿಸಬೇಕಿದೆ. ಟಾಮ್ ಮೂಡಿ ಅವರಿಗೆ ಸೆಹ್ವಾಗ್ ಗಿಂತ ಹೆಚ್ಚಿನ ಅನುಭವವಿದ್ದರೂ 2019ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ಆಟಗಾರರನ್ನು ಬೆಳೆಸಲು ಸೆಹ್ವಾಗ್ ಅವರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿಯಿದೆ.