ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿಯಲ್ಲಿ ಭಾಗವಹಿಸಲು ಭಾರತ ಸಹ ತನ್ನ ತಂಡವನ್ನು ಶನಿವಾರ ಪ್ರಕಟಿಸಿದೆ. ಟೀಮ್ ಇಂಡಿಯಾ ಪ್ರಕಟಿತ ತಂಡ ಬಲಿಷ್ಠವಾಗಿದೆ. ಆದರೆ ಕೆಲವೊಂದು ಗೊಂದಲಗಳಿಂದ ಕೂಡಿದೆ. ಹಾಗಿದ್ದರೆ ಟೀಮ್ ಇಂಡಿಯಾದಲ್ಲಿ ಸದ್ಯ ಇರುವ ಗೊಂದಲ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಶನಿವಾರ ಟೀಮ್ ಇಂಡಿಯಾವನ್ನು ಪ್ರಕಟಿಸಿದಾಗ ಎಲ್ಲರ ನಾಯಕ, ಉಪನಾಯಕನ ಜೊತೆಗೆ ಸಂಪೂರ್ಣ ತಂಡವನ್ನು ಲೆಕ್ಕಾಚಾರ ಮಾಡಿದರು. ಅದರಲ್ಲಿ ಯಶಸ್ವಿ ಜೈಸ್ವಾಲ್ ಹೆಸರು ಕಾಣಿಸಿಕೊಂಡಿತು. ಇದೇ ಮೊದಲ ಬಾರಿಗೆ ಯಶಸ್ವಿ ಜೈಸ್ವಾಲ್ ಅವರಿಗೆ ಏಕದಿನ ಕ್ರಿಕೆಟ್ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಹೌದು ಎಂದಾದರೆ ಇವರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.

ಟೀಮ್ ಇಂಡಿಯಾದ ಪರ ಟೆಸ್ಟ್ ಹಾಗೂ ಟಿ20 ಫಾರ್ಮೆಟ್ನಲ್ಲಿ ಓಪನ್ ಆಗಿ ಬ್ಯಾಟ್ ಮಾಡುವ ಯಶಸ್ವಿ ಜೈಸ್ವಾಲ್, ಏಕದಿನ ಕ್ರಿಕೆಟ್ನಲ್ಲಿ ಯಾವ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಾರಣ ಆರಂಭಿಕರಾಗಿ ಕಾಣಿಸಿಕೊಳ್ಳುವ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭಮನ್ ಗಿಲ್ ಕಾಣಿಸಿಕೊಳ್ಳಲಿದ್ದು, ಯಶಸ್ವಿ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುವಾಗ ಒಂದು ವಿಕೆಟ್ ಹೋದರೆ, ಬರುವ ಆಟಗಾರನೇ ವಿರಾಟ್ ಕೊಹ್ಲಿ. ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಅವರ ಕ್ರಮಾಂಕವನ್ನು ಈಗ ಚೇಂಜ್ ಮಾಡುವುದು ತಂಡದ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಅವರ ಕ್ರಮಾಂಕವನ್ನು ಚೇಂಜ್ ಮಾಡಿದ್ದೇ ಆದಲ್ಲಿ ಅದು ನೇರವಾಗಿ ತಂಡದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಸ್ಥಾನದಲ್ಲಿ ಯಶಸ್ವಿ ಆಡುವುದು ಡೌಟ್.
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಆಟಗಾರ ಶ್ರೇಯಸ್ ಅಯ್ಯರ್. ನಾಲ್ಕನೇ ಕ್ರಮಾಂಕಕ್ಕೆ ಇವರು ನ್ಯಾಯ ಒದಗಿಸಿದ್ದಾರೆ. ಅಲ್ಲದೆ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ರನ್ ಕಲೆ ಹಾಕಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಸದ್ಯ ಶ್ರೇಯಸ್ ಅಮೋಘ ಟಚ್ನಲ್ಲಿದ್ದು ಇವರ ಸ್ಥಾನವನ್ನು ಅಲುಗಾಡಿಸುವುದು ಕಷ್ಟ.

ಟೀಮ್ ಇಂಡಿಯಾದ ಮೇಲಿನ ಟಾಪ್ ಆರ್ಡರ್ಗಳನ್ನು ಏಕದಿನ ಕ್ರಿಕೆಟ್ನಲ್ಲಿ ಫಿಲ್ ಮಾಡಿಕೊಂಡಿರುವ ಹಾಗೆ, ಐದನೇ ಕ್ರಮಾಂಕವನ್ನು ಸಹ ಕೆಎಲ್ ರಾಹುಲ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದ ಸಂಯೋಜನೆಗೆ ಸೂಟ್ ಆಗಬಹುದು. ಹೀಗಾಗಿ ಇವರ ಕ್ರಮಾಂಕವನ್ನು ಮುಟ್ಟುವ ಯೋಚನೆ ಮ್ಯಾನೇಜ್ಮೆಂಟ್ಗೆ ಇರುವುದಿಲ್ಲ.
ಒಂದು ವೇಳೆ ಯಶಸ್ವಿ ಜೈಸ್ವಾಲ್ ಅವರಿಗೆ ಸ್ಥಾನವನ್ನು ನೀಡಿದ್ದೇ ಆದಲ್ಲಿ ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿಸಬಹುದು. ಆಗ ಶ್ರೇಯಸ್ ಅಯ್ಯರ್ ಇನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕಾಗುತ್ತದೆ. ಇಂತಹ ರಿಸ್ಕ್ ಡಿಸಿಜನ್ ಮ್ಯಾನೇಜ್ಮೆಂಟ್ ಆರಂಭಿಕ ಪಂದ್ಯಗಳಲ್ಲಿ ತೆಗೆದುಕೊಳ್ಳುವುದಿಲ್ಲ.