ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಪರ್ತ್ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕೆಎಲ್ ರಾಹುಲ್ ಅವರು ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತುಕೊಂಡರು. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಹೊತ್ತ, ಕನ್ನಡಿಗ ರಾಹುಲ್ ಮನಮೋಹಕ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು.
ಟೀಮ್ ಇಂಡಿಯಾಕ್ಕೆ ಬೇಕಿದ್ದ ನೆಲಕಚ್ಚಿ ನಿಂತು ಆಡುವ ಆಟವನ್ನು ಆಡಲು ಮುಂದಾದರು. ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ವಿಕೆಟ್ ಬಿದಿದ್ದು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಕೆಎಲ್ ರಾಹುಲ್ ಔಟ್ ಆದ ಬಗ್ಗೆ ಮಾಜಿ ಆಟಗಾರರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಿದರು. ಈ ವೇಳೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನು ಕೆಎಲ್ ರಾಹುಲ್ ಹೊತ್ತುಕೊಂಡರು. ತಮ್ಮ ಮೇಲೆ ಇದ್ದ ಟೀಕೆಗೆ ಉತ್ತರಿಸುವಂತೆ ಬ್ಯಾಟ್ ಮಾಡಿದ ರಾಹುಲ್ ಬಿಗ್ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರು. ಆದರೆ ಇವರ ಆಸೆಗೆ ಮೂರನೇ ಅಂಪೈರ್ ಕೊಳ್ಳಿ ಇಟ್ಟರು. ಈ ಪಂದ್ಯದಲ್ಲಿ ಅವರು 74 ಎಸೆತಗಳಲ್ಲಿ 26 ರನ್ಗಳಿಸಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಅಲ್ಲಿ ಅವರು ಮೂರು ಬೌಂಡರಿಗಳನ್ನು ಬಾರಿಸಿದ್ದರು
ಇನಿಂಗ್ಸ್ನ 23ನೇ ಓವರ್ನ್ನು ಬೌಲ್ ಮಾಡುವ ಹೊಣೆಯನ್ನು ಮಿಚೆಲ್ ಮಾರ್ಷ ಹೊತ್ತುಕೊಂಡರು. ಕೆಎಲ್ ರಾಹುಲ್ ಈ ಓವರ್ನ ಎರಡನೇ ಎಸೆತವನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಬ್ಯಾಟ್ ಬಳಿ ಹಾದುಹೋಯಿತು. ಇದನ್ನು ಕಂಡ ಆಸೀಸ್ ಫೀಲ್ಡರ್ಗಳು ಮನವಿ ಮಾಡಿದರು. ಆದರೆ, ಅಂಪೈರ್ ನಟೌಟ್ ಎಂದು ನೀಡಿದಾಗ, ಆತಿಥೇಯ ತಂಡ ಡಿಆರ್ಎಸ್ ಮನವಿ ಮಾಡಿತು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಲು ಮುಂದಾದರು.
ರಾಹುಲ್ ಅವರ ನಿರ್ಣಯವನ್ನು ಪರಿಶೀಲಿಸಲು ಸ್ನಿಕೋಮೀಟರ್ ಮೊರೆ ಹೋದರು. ರಾಹುಲ್ ಪ್ಯಾಡ್ ಹಾಗೂ ಬ್ಯಾಟ್ ಗೆ ಬಡೆದ ಹಾಗೆ ಕಾಣಿಸಿತು. ಥರ್ಡ್ ಅಂಪೈರ್ ಇದನ್ನು ಎರಡು ಬಾರಿ ನೋಡಿ ಔಟ್ ಎಂದು ನೀಡಿದರು. ಆದರೆ ಚೆಂಡು ರಾಹುಲ್ ಅವರ ಬ್ಯಾಟ್ಗೆ ಬಡಿದಾಗ ಸ್ನಿಕೋಮೀಟರ್ನಲ್ಲಿ ಸ್ಪಷ್ಟವಾಗಿ ಕಾಣಲಿಲ್ಲ. ಆದರೆ ಇದನ್ನು ಕುಲಂಕುಶವಾಗಿ ಪರಿಶೀಲಿಸುವುದನ್ನು ಬಿಟ್ಟು ಔಟ್ ಎಂದು ನಿರ್ಣಯ ನೀಡಿದರು. ಈ ತೀರ್ಪಿಗೆ ಸಂಬಂಧಿಸಿದಂತೆ ಅನೇಕ ಮಾಜಿ ಆಟಗಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.