ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಶುಕ್ರವಾರ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಪಡೆ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ಈ ವೇಳೆ ಒಂದು ವಿವಾದ ಹುಟ್ಟಿಕೊಂಡಿತು. ಈ ವಿವಾದದ ಬಗ್ಗೆ ಜೆಮಿಮಾ ರೋಡ್ರಿಗಸ್ ಸ್ಪಷ್ಟನೆ ನೀಡಿದ್ದಾರೆ.
ಈ ವಿವಾದ ಭಾರೀ ಸದ್ದು ಮಾಡುತ್ತಿದೆ. ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಸಹ ಫೀಲ್ಡ್ನಲ್ಲಿದ್ದ ಇಬ್ಬರೂ ಅಂಪೈರ್ಗಳ ಜೊತೆ ವಾಗ್ವಾದ ನಡೆಸಿದರು. ಅಲ್ಲದೆ ಬೌಂಡರಿ ಬಳಿಯಿದ್ದ ಮೂರನೇ ಅಂಪೈರ್ ಬಳಿ ಹೋಗಿ ಮಾತುಕತೆ ನಡೆಸಿದರು. ಇದೇ ವೇಳೆ ಟೀಮ್ ಇಂಡಿಯಾದ ಕೋಚ್ ಸಹ ಉಪಸ್ಥಿತರಿದ್ದರು. ಈ ಸಂಪೂರ್ಣ ಘಟನೆಯ ಬಗ್ಗೆ ಟೀಮ್ ಇಂಡಿಯಾದ ಅನುಭವಿ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ತುಟಿ ಬಿಚ್ಚಿದ್ದಾರೆ.

ನ್ಯೂಜಿಲೆಂಡ್ ಇನಿಂಗ್ಸ್ನ 14ನೇ ಓವರ್ನಲ್ಲಿ ಕಿವೀಸ್ ಆಟಗಾರ್ತಿ ಅಮೆಲಿಯಾ ಕೇರ್ ಬ್ಯಾಟಿಂಗ್ ಮಾಡುತ್ತಿದ್ದರು. ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಎಸೆದ ಓವರ್ನ ಕೊನೆಯ ಎಸೆತವನ್ನು ಕಿವೀಸ್ ಬ್ಯಾಟರ್ ಲಾಂಗ್ ಆಫ್ನತ್ತ ನೂಕಿ ಒಂದು ರನ್ ಪಡೆದರು. ಆಗ ಭಾರತದ ಬೌಲರ್ ದೀಪ್ತಿ ಶರ್ಮಾ ಓವರ್ ಮುಕ್ತಾಯವಾಗಿದೆ ಎಂದು ಅಂಪೈರ್ ಬಳಿ ಕ್ಯಾಪ್ ಪಡೆದರು. ಇದೇ ವೇಳೆ ಕೆರ್ ಎರಡನೇ ರನ್ ಕದಿಯಲು ಯತ್ನಿಸಿದರು. ಇದನ್ನು ಗಮನಸಿದ ಹರ್ಮನ್ ಪ್ರೀತ್ ಕೌರ್ ಚೆಂಡನ್ನು ವಿಕೆಟ್ ಕೀಪರ್ ಕಡೆಗೆ ಎಸೆದರು. ಕಿವೀಸ್ ಬ್ಯಾಟರ್ ಕ್ರೀಸ್ಗೆ ಬರುವ ಮುನ್ನವೇ ರಿಚಾ ವಿಕೆಟ್ ಎಗರಿಸಿದರು. ಕೆರ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.
ಮೂರನೇ ಅಂಪೈರ್ ಅಮೆಲಿಯಾ ಕೇರ್ ಅವರನ್ನು ತಡೆದು ಮೈದಾನದಲ್ಲಿ ಇರುವಂತೆ ಸೂಚಿಸಿದರು. ಅಲ್ಲದೆ ನಟೌಟ್ ಎಂದು ತಿಳಿಸಿದರು. ಆಗ ಮೈದಾನದಲ್ಲಿ ವಿವಾದ ಸೃಷ್ಟಿ ಆಯಿತು.
ಈ ಬಗ್ಗೆ ಜೆಮಿಮಾ ರೋಡ್ರಿಗಸ್ ಮಾತನಾಡಿದ್ದಾರೆ. ಅಂಪೈರ್ ದೀಪ್ತಿಗೆ ಕ್ಯಾಪ್ ನೀಡಿದಾಗ ನಾನು ಅಲ್ಲಿ ಇರಲಿಲ್ಲ. ನ್ಯೂಜಿಲೆಂಡ್ ಪ್ಲೇಯರ್ ಎರಡು ರನ್ಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಯಿತು. ಕೆರ್ ಸಹ ಅದರಂತೆ ಕ್ರೀಸ್ನತ್ತ ಓಡಿದರು. ನಮಗೆ ನಾವು ಕಿವೀಸ್ ತಂಡದ ವಿಕೆಟ್ ಪಡೆದ ಬಗ್ಗೆ ಸಂತಸವಾಯಿತು. ಅಮೆಲಿಯಾ ಹೊರ ಹೋಗಲು ಸಿದ್ಧರಾದರು. ಅವರಿಗೂ ತಾನು ಔಟ್ ಎಂದು ತಿಳಿದಿತ್ತು. ಇದಾದ ಬಳಿಕ ಅಂಪೈರ್ ನಿರ್ಣಯವನ್ನು ಒಪ್ಪಿಕೊಳ್ಳಲು ನಮಗೆ ಕಷ್ಟವಾಯಿತು. ಈ ಎಲ್ಲ ಘಟನೆಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ನಾವು ಅಂಪೈರ್ ನಿರ್ಣಯವನ್ನು ಗೌರವಿಸಲೇ ಬೇಕು ಎಂದು ಜೆಮಿಮಾ ರೋಡ್ರಿಗಸ್ ತಿಳಿಸಿದ್ದಾರೆ.
ಕಿವೀಸ್ ತಂಡವು ಯೋಜನಾ ಬದ್ಧ ಆಟವನ್ನು ಆಡಿತು. ನಾವು ಅವಕಾಶಗಳನ್ನು ಸೃಷ್ಟಿಸಿದ್ದೇವೆ ಆದರೆ ಅದರ ಲಾಭ ಪಡೆಯುವಲ್ಲಿ ವಿಫಲರಾದೆವು. ಈ ಸೋಲಿನ ಬಳಿಕ ನಾವು ಪಾಠ ಕಲಿತಿದ್ದೇವೆ. ಈ ಸೋಲಿನಿಂದ ನಾವು ಪಂದ್ಯಾವಳಿಯಿಂದ ಹೊರ ಹೋಗುವುದಿಲ್ಲ ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ.