ಜಲಂಧರ್, ನ.01: ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಗೆಳತಿ ಗೀತಾ ಬಸ್ರಾ ಅವರ ಮದುವೆಯ ಗಲಾಟೆ ಮುಂದುವರೆದಿದೆ. ಮಾಧ್ಯಮಗಳ ಮುಂದೆ ಹರ್ಭಜನ್ ಕ್ಷಮೆಯಾಚಿಸಿದ ಪ್ರಸಂಗದ ನಂತರ ಹರ್ಭಜನ್ ಮದುವೆ ಸಮಾರಂಭದ ಮೇಲೆ ಸಿಖ್ ಸಮುದಾಯ ಗರಂ ಆಗಿದೆ.
ಹರ್ಭಜನ್ ಸಿಂಗ್ ಅವರ ಮದುವೆ ಸಮಾರಂಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಡೆಯೊಡ್ಡಿದ್ದಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಕೊನೆಗೆ ಹರ್ಭಜನ್ ಸಿಂಗ್ ಅವರೇ ಮನೆಯಿಂದ ಹೊರಬಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಕೈ ಜೋಡಿಸಿ ಕ್ಷಮೆಯಾಚಿಸಿ ಗಲಾಟೆಯನ್ನು ತಣ್ಣಗಾಗಿಸಿದ್ದರು. ಅದರೆ, ಹರ್ಭಜನ್ ಸಿಂಗ್ ಅವರ ಅಂಗರಕ್ಷಕರ ವಿರುದ್ಧ ಜಲಂಧರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇಲ್ಲಿ ಸ್ಮರಿಸಬಹುದು. [ಹರ್ಭಜನ್ ಮದ್ವೆಯಲ್ಲಿ ಗಲಾಟೆ, ಸ್ಸಾರಿ ಕೇಳಿದ ಭಜ್ಜಿ]
ಸಿಖ್ ಸಮುದಾಯ ಗರಂ: ಹರ್ಭಜನ್ ಸಿಂಗ್ ಅವರ ಮದುವೆಯಲ್ಲಿ ಸುಮಾರು 113 ಬಗೆಯ ತಂಬಾಕು ಪದಾರ್ಥಗಳನ್ನು ಬಂದಿದ್ದ ಅತಿಥಿಗಳಿಗೆ ನೀಡಲಾಗಿದೆ ಎಂಬ ಆರೋಪ ಹೊರೆಸಿ ಕೆಲ ಸಿಖ್ ಸಂಘಟನೆಗಳು ದೂರು ನೀಡಿವೆ. ಸಿಖ್ ಸಂಪ್ರದಾಯದಂತೆ ಮದುವೆ ಹಾಗೂ ಶುಭ ಸಂದರ್ಭಗಳಲ್ಲಷ್ಟೇ ಅಲ್ಲದೇ ಯಾವುದೇ ಸಂದರ್ಭದಲ್ಲಾದರೂ ತಂಬಾಕು ಸೇವನೆ ಹಾಗೂ ಆಲ್ಕೋಹಾಲ್ ಸೇವನೆ ನಿಷಿದ್ಧವಾಗಿದೆ.
ಹರ್ಭಜನ್ ಸಿಂಗ್ ಅವರು ಪಂಜಾಬಿ ಸಂಪ್ರದಾಯದಂತೆ ಮದುವೆಯಾಗಿದ್ದು, ತಂಬಾಕು ಸೇವನೆ ಮಾಡಿರುವುದು ಪತ್ತೆಯಾಗಿದೆ ಹೀಗಾಗಿ ದೂರು ನೀಡಲಾಗಿದೆ ಎಂದು ಸಿಖ್ ಸಂಘಟನೆಗಳು ಹೇಳಿವೆ. ಮಾಧ್ಯಮ ಪ್ರತಿನಿಧಿಗಳಿಗೆ ಆದ ತೊಂದರೆಗೆ ಹರ್ಭಜನ್ ಸಿಂಗ್ ಕ್ಷಮೆಯಾಚನೆ ಮಾಡಿದ್ದರು. ಅದರೆ, ಪ್ರಕರಣದ ತನಿಖೆ ನಡೆಸಿದ ಜಲಂಧರ್ ಪೊಲೀಸರು, ಹರ್ಭಜನ್ ಸಿಂಗ್ ಅವರ ಬೌನ್ಸರ್ ಗಳಾದ ಬಾಬೂಲ್, ಕುಲದೀಪ್, ರವಿ ಹಾಗೂ ನವ್ಜೋತ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. (ಒನ್ ಇಂಡಿಯಾ ಸುದ್ದಿ)