ಶಿವಮೊಗ್ಗ ನವೆಂಬರ್ 28 : ಶಿವಮೊಗ್ಗದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಕ್ರೀಡಾಂಗಣದಲ್ಲಿ ನ. 29 ರಿಂದ ಡಿಸೆಂಬರ್ 2ರವರೆಗೆ 19 ವರ್ಷದೊಳಗಿನ ಬಿಸಿಸಿಐ ಕೂಚ್ ಬೆಹರ್ ಟೋಫಿ ಪಂದ್ಯ ಏರ್ಪಡಿಸಲಾಗಿದೆ. ಈ ಬಗ್ಗೆ ಇವತ್ತು ಕೆಎಸ್ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಅರುಣ್ ಮಾಹಿತಿಯನ್ನು ನೀಡಿದ್ದಾರೆ
19 ವರ್ಷದೊಳಗಿನ ಕೂಚ್ ಬೆಹರ್ ಟೋಫಿಯ ಕರ್ನಾಟಕ ಮತ್ತು ಗುಜರಾತ್ ತಂಡಗಳ ನಡುವೆ ಪಂದ್ಯ ಶಿವಮೊಗ್ಗದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು 19 ವರ್ಷದೊಳಗಿನ ಕ್ರಿಕೆಟ್ ಪಟುಗಳಿಗೆ ಕೂಚ್ ಬೆಹರ್ ಟ್ರೋಫಿಯು ಮಹತ್ವದ ದೇಶಿಯ ಕ್ರಿಕೆಟ್ ಪಂದ್ಯಾವಳಿ ಆಗಿದೆ. ವಿವಿಧ ರಾಜ್ಯಗಳ ಸ್ಥಳಿಯ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯ ಪ್ರದರ್ಶಿಸಲು ದೊಡ್ಡ ವೇದಿಕೆ ಇದಾಗಿದೆ ಎಂದರು.
ಕೂಚ್ ಬೆಹರ್ ಟ್ರೋಫಿಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರಿಕೆಟರ್ ಅಂತರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಪಡೆದಿರುವ ಅನೇಕ ಉದಾಹರಣೆಗಳಿವೆ, ಕರ್ನಾಟಕದ ಮಯಾಂಕ್ ಅಗರ್ವಾಲ್ ಕೂಚ್ ಬೆಹರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಯು-19 ವಿಶ್ವಕಪ್ಗೆ ಅರ್ಹತೆ ಪಡೆದಿದ್ದರು ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಇದಾಗಿದೆ ಎಂದು ತಿಳಿಸಿದರು.
ಕೆಎಸ್ಸಿಎ ಕ್ರೀಡಾಂಗಣದಲ್ಲಿ ಈಗಾಗಲೇ ರಣಜಿ ಪಂದ್ಯಾವಳಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಿರಿಯರ ಟೂರ್ನಿ, ಮಹಿಳಾ ಕ್ರಿಕೆಟ್, ರಾಷ್ಟ್ರೀಯ ಎ ತಂಡಗಳ ಪಂದ್ಯಗಳು ನಡೆದಿವೆ. ಇದೀಗ ಕೂಚ್ ಬೆಹರ್ ಟ್ರೋಫಿ ಪಂದ್ಯಾವಳಿಗೆ ಕ್ರೀಡಾಂಗಣ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.
ಕೆಎಸ್ಸಿಎ ಶಿವಮೊಗ್ಗ ವಲಯ ಮಾಜಿ ಸಂಚಾಲಕ ಡಿ.ಆರ್.ನಾಗರಾಜ್, ಶಿವಮೊಗ್ಗ ವಲಯ ಮಾಜಿ ಅಧ್ಯಕ್ಷ ಸುಕುಮಾರ್ ಪಟೇಲ್, ಕೆಎಸ್ಸಿಎ ಶಿವಮೊಗ್ಗ ವಲಯ ಮ್ಯಾನೇಜರ್ ಯಶವಂತ್ ನಾಯಕ್ ಸುದ್ದಿಗೋಷ್ಠಿಯಲ್ಲಿದ್ದರು.