
ಭಾರತದಲ್ಲಿ ಕೊರೊನವೈರಸ್ನ ಮೂರನೇ ಅಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೇವಲ 10 ದಿನಗಳ ಹಿಂದೆ ದೇಶದ ಕೊರೊನಾವೈರಸ್ನ ನಿತ್ಯ ಹೊಸ ಪ್ರಕರಣದ ಸಂಖ್ಯೆ 6 ಸಾವಿರಕ್ಕೆ ಇಳಿಕೆಯಾಗಿತ್ತು. ಆದರೆ ಬಳಿಕ ಆರಂಭವಾದ ಮೂರನೇ ಅಲೆ ನಿರೀಕ್ಷೆಗೂ ಮೀರಿದ ವೇಗದಲ್ಲಿ ಅಬ್ಬರಿಸುತ್ತಿದ್ದು ಜನವರಿ 6ರಂದು ಭಾರತದಲ್ಲಿ ಒಟ್ಟು ಕೊರೊನಾವೈರಸ್ನ ಹೊಸ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ. ಅದರಲ್ಲೂ ಮಹಾರಾಷ್ಟ್ರವೊಂದರಲ್ಲಿಯೇ ಗುರುವಾರದ ಹೊಸ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 36 ಸಾವಿರ ದಾಟಿದೆ.
ಮಹಾರಾಷ್ಟ್ರದಲ್ಲಿ ಈ ಕೊರೊನಾವೈರಸ್ನ ಮೂರನೇ ಅಲೆಯ ಪರಿಣಾಮ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಮೇಲೆ ಕೂಡ ಬಿದ್ದಿದೆ. ಬಿಸಿಸಿಐನ ಮುಖ್ಯ ಕಚೇರಿ ಮುಂಬೈನಲ್ಲಿದ್ದು ಈ ಕಛೇರಿಯಲ್ಲಿಯೂ ಸಿಬ್ಬಂದಿಗಳಲ್ಲಿಯೂ ಕೊರೊನಾವೈರಸ್ ದೃಢಪಟ್ಟಿದೆ. ಒಟ್ಟು ಮೂವರಲ್ಲಿ ಕೊರೊನಾವೈರಸ್ನ ಪತ್ತೆಯಾಗಿದ್ದು ಮೂರು ದಿನಗಳ ಕಾಲ ಬಿಸಿಸಿಐನ ಕೇಂದ್ರ ಕಚೇರಿಯನ್ನು ಮುಚ್ಚಲಾಗಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐನ ಕೇಂದ್ರ ಕಚೇರಿಯನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ. ಕೊರೊನಾವೈರಸ್ಗೆ ತುತ್ತಾಗಿರುವ ಸಿಬ್ಬಂದಿಗಳು ತಮ್ಮ ನಿವಾಸದಲ್ಲಿಯೇ ಹೋಮ್ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಇನ್ನು ಈ ಕಟ್ಟಡ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ನ ಕಚೇರಿಯೂ ಆಗಿದ್ದು ಇದಕ್ಕೆ ಸಂಬಂಧಿಸಿದ 15 ಸಿಬ್ಬಂದಿಗಳಿಗೆ ಕೊರೊನಾವೈರಸ್ ವರದಿ ಪಾಸಿಟಿವ್ ಬಂದಿದೆ ಎಂದು ವರದಿಯಾಗಿದೆ.
ಬಿಸಿಸಿಐ ಈ ಆವೃತ್ತಿಯ ರಣಜಿ ಟೂರ್ನಿ ಹಾಗೂ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಒಂದು ದಿನದ ನಂತರ ಬಿಸಿಸಿಐ ಕಚೇರಿಯಲ್ಲಿ ಕೊರೊನಾವೈರಸ್ ಆಘಾತ ನೀಡಿದೆ. ಇನ್ನು ಕ್ರಿಕೆಟ್ ಅಸೋಸಿಯೇಶನ್ ಆಫ್ ಬೆಂಗಾಲ್ನಲ್ಲಿಯೂ ಸೌರವ್ ಗಂಗೂಲಿಗೆ ಕೊರೊನಾವೈರಸ್ ಕಾಣಿಸಿಕೊಂಡ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಸೌರವ್ ಗಂಗೂಲಿಯನ್ನು ಹೊರತುಪಡಿಸಿ ಕ್ರಿಕೆಟ್ ಅಸೋಸಿಯೇಶನ್ನ ಖಜಾಂಚಿಯಾಗಿರುವ ಗಂಗೂಲಿ ಅಂಕಲ್ ದೆಬಾಶಿಶ್ ಗಂಗೂಲಿ ಕೂಡ ಕೊರೊನಾವೈರಸ್ಗೆ ತುತ್ತಾಗಿದ್ದಾರೆ.
ಇನ್ನಿ ಬಿಸಿಸಿಐ ಗುರುವಾರ ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು. "ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಂಗಳವಾರ ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ, ಕರ್ನಲ್ ಸಿಕೆ ನಾಯ್ಡು ಟ್ರೋಫಿ ಮತ್ತು ಸೀನಿಯರ್ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿಗಳನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಪ್ರಕಟಣೆಯನ್ನು ತಿಳಿಸಿತ್ತು.
ಇನ್ನು ಸದ್ಯ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದೆ. ಒಮಿಕ್ರಾನ್ ವೈರಸ್ ಪ್ರಕರಣಗ್ಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರೇಕ್ಷಕರ ಅಲಭ್ಯತೆಯಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿಯನ್ನು ಆಯೋಜಿಸಲಾಗುತ್ತಿದೆ.