
ಬೆಂಗಳೂರು, ಮಾರ್ಚ್ 30: ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ಸಿಎ) ಕೈ ಸೇರಿಸಿದೆ. ಕೊರೊನಾ ಹತ್ತಿಕ್ಕುವುದಕ್ಕಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ 1 ಕೋಟಿ ರೂ. ಕೊಡುಗೆ ನೀಡಿದೆ. 1 ಕೋ.ರೂ.ನಲ್ಲಿ 50 ಲಕ್ಷ ರೂ. ಕೇಂದ್ರಕ್ಕೆ, 50 ಲಕ್ಷ ರೂ. ರಾಜ್ಯ ಸರ್ಕಾರಕ್ಕೆ ತಲುಪಲಿದೆ.
ಟ್ವಿಟರ್ನಲ್ಲಿ ಕರ್ನಾಟಕ ರಣಜಿ ತಂಡ ಈ ವಿಚಾರವನ್ನು ತಿಳಿಸಿದೆ. 'ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ 1 ಕೋಟಿ ರೂ. (ತಲಾ 50 ಲ.ರೂ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ) ದಾನ ನೀಡುತ್ತಿದೆ,' ಎಂದು ಟ್ವಿಟರ್ನಲ್ಲಿ ಬರೆದುಕೊಳ್ಳಲಾಗಿದೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಸಮಯೋಚಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಕ್ಕೆ ನಮ್ಮ ಮೆಚ್ಚುಗೆಗಳು. ನಾವು ಇನ್ನೂ ನಮ್ಮ ಕೈಲಾದ ಬೆಂಬಲ ನೀಡುತ್ತೇವೆ ಎಂದು ಟ್ವೀಟ್ನ ಮುಂದುವರೆದ ಭಾಗದಲ್ಲಿ ಬರೆಯಲಾಗಿದೆ.
ಸೋಮವಾರ (ಮಾರ್ಚ್ 30) ಭಾರತದಲ್ಲಿ ಸುಮಾರು 1071 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 100 ಮಂದಿ ಈಗಾಗಲೇ ಗುಣಮುಖರಾಗಿದ್ದರೆ, 29 ಮಂದಿ ಸಾವನ್ನಪ್ಪಿದ್ದರು. ಮಾರಕ ಕೊರೊನಾವೈರಸ್ ಹತ್ತಿಕ್ಕಲು ಭಾರತದ ಅನೇಕ ಕ್ರೀಡಾಪಟುಗಳು ಮತ್ತು ಕ್ರೀಡಾಸಂಸ್ಥೆಗಳು ಈಗಾಗಲೇ ಸರ್ಕಾರದೊಂದಿಗೆ ಕೈ ಜೋಡಿಸಿವೆ.