ಕೊರೊನಾ ಸಂಕಟ ಜೋರಾಗಲಿದೆ
ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ಯುಎಇಯಲ್ಲಿ ಐಪಿಎಲ್ ನಡೆಯುವುದರಲ್ಲಿದೆ. ಆದರೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಅಕ್ಟೋಬರ್ನಲ್ಲೇ ಕೊರೊನಾ ಆತಂಕ ಇನ್ನಷ್ಟು ಹೆಚ್ಚುವ ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ನಲ್ಲಿ ಕೊರೊನಾ ಸಂಕಟ ಮತ್ತೂ ಜೋರಾಗಲಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ತಲೆನೋವು ಶುರುವಾಗಲಿದೆ
ಡೆಕ್ಕನ್ ಕ್ರಾನಿಕಲ್ಸ್ ವೆಬಿನಾರ್ನಲ್ಲಿ ಮಾತನಾಡಿದ 'ಗ್ರೇಟ್ ವಾಲ್' ದ್ರಾವಿಡ್, 'ಕೆಲ ಅಂತಾರಾಷ್ಟ್ರೀಯ ಟೂರ್ನಿಗಳು ರದ್ದಾದವು ಮತ್ತು ಮರು ವೇಳಾಪಟ್ಟಿಗೆ ಒಳಪಟ್ಟವು. ಜನರಿಗೆ ಪಂದ್ಯಗಳು ನಡೆಸಲು ಯಾವಾಗಲೂ ಸಮಯ ಮತ್ತು ಸ್ಥಳ ಸಿಗುತ್ತದೆ. ಆದರೆ ಮುಂಬರುವ ಅಕ್ಟೋಬರ್ನಲ್ಲಿ ಕೊರೊನಾ ನಮಗೆ ಇನ್ನಷ್ಟು ತಲೆ ನೋವು ತರಲಿದೆ,' ಎಂದರು.
ದೇಸೀ ಕ್ರಿಕೆಟ್ ಅಕ್ಟೋಬರ್ನಲ್ಲಿ
ಮಾತು ಮುಂದುವರೆಸಿದ ದ್ರಾವಿಡ್, 'ಅಕ್ಟೋಬರ್ನಲ್ಲಿ ಸಮಸ್ಯೆ ನಮ್ಮನ್ನು ಇನ್ನೂ ಜಾಸ್ತಿ ಬಡಿಯಲಾರಂಭಿಸುತ್ತದೆ ಎಂದು ನನಗನ್ನಿಸುತ್ತದೆ. ಯಾಕೆಂದರೆ ಮುಂದೆ ದೇಸೀ ಸೀಸನ್ ಆರಂಭವಾಗಲಿದೆ. ದೇಸೀಯ ಜೂನಿಯರ್ಗಳಿಗೆ ಅಂಡರ್ 16, ಅಂಡರ್ 19 ಮತ್ತು ಮಹಿಳಾ ಕ್ರಿಕೆಟರ್ಗಳಿಗೆ ಸೀಸನ್ ಆರಂಭವಾಗೋದೇ ಅಕ್ಟೋಬರ್ನಲ್ಲಿ,' ಎಂದು ವಿವರಿಸಿದರು.
ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭ
ಭಾರತದಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿಲ್ಲ. ಕೆಲ ಆಟಗಾರರು, ಕ್ರಿಕೆಟಿಗರು ಅಭ್ಯಾಸ ಶುರು ಮಾಡಿದ್ದಾರಷ್ಟೆ. ಅಕ್ಟೋಬರ್-ನವೆಂಬರ್ನಲ್ಲಿ ಕೊರೊನಾ ಸುಧಾರಿಸುವ ನಿರೀಕ್ಷೆಯನ್ನಿಟ್ಟು ದೇಸೀ ಕ್ರಿಕೆಟ್ ಸ್ಪರ್ಧೆಗಳಿಗಾಗಿ ಕಾಯಲಾಗುತ್ತಿದೆ. ಸದ್ಯಕ್ಕೆ ದೇಸೀ ಕ್ರಿಕೆಟ್ನ ಯಾವುದೇ ವೇಳಾಪಟ್ಟಿ ಖಾತರಿಗೊಂಡಿಲ್ಲ. ಸೆಪ್ಟೆಂಬರ್ನಲ್ಲಿ ಐಪಿಎಲ್ ಆರಂಭವಾದರೆ, ಅಕ್ಟೋಬರ್ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಗಳು ಆರಂಭವಾಗಲಿವೆ.