
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಬೇಡದ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರನ್ನು ಪದೇ ಪದೇ ಜನಾಂಗೀಯ ನಿಂದನೆಗೆ ಒಳಪಡಿಸುತ್ತಿರುವುದು ಸಾಕಷ್ಟು ಟೀಕೆಗೆ ಗುರಿಯಾಗುತ್ತಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ತನಿಖೆಯನ್ನು ನಡೆಸಲಾಗುತ್ತಿದೆ.
ಈ ಘಟನೆಗೆ ಸಂಬಂಧಪಟ್ಟಂತೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಸ್ಟ್ರೇಲಿಯಾ ಟೀಮ್ ಇಂಡಿಯಾದ ಕ್ಷಮೆಯಾಚನೆಯನ್ನು ಮಾಡಿದೆ. ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಪ್ರೇಕ್ಷಕರು ತೋರಿದ ವರ್ತನೆಯನ್ನು ಖಂಡಿಸಿರುವ ಮಂಡಳಿ ಆಗಿರುವ ಬೆಳವಣಿಗೆಗೆ ಕ್ಷಮೆಯಾಚಿಸಿದೆ.
ಮೂರನೇ ದಿನದಾಟದ ವೇಳೆ ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಪ್ರೇಕ್ಷಕರು ಟೀಮ್ ಇಂಡಿಯಾದ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಅದಾದ ಬಳಿಕ ಭಾನುವಾರವೂ ಮೊಹಮ್ಮದ್ ಸಿರಾಜ್ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಹೀಗಾಗಿ ಆರು ಮಂದಿಯನ್ನು ಸಿಡ್ನಿ ಮೈದಾನದಿಂದ ಹೊರಕ್ಕೆ ಕಳುಹಿಸಲಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಸಮಗ್ರತೆ ಮತ್ತು ಭಧ್ರತೆಯ ಮುಖ್ಯಸ್ಥ ಶಾನ್ ಕಾರೊಲ್ "ಎಲ್ಲಾ ತಾರತಮ್ಯದ ನಡವಳಿಕೆಯನ್ನು ಆಸ್ಟ್ರೇಲಿಯಾ ಪ್ರಬಲ ಪದಗಳಲ್ಲಿ ಖಂಡಿಸುತ್ತದೆ. ಜನಾಂಘೀಯ ನಿಂದನೆಯಲ್ಲಿ ನೀವು ಪಾಲ್ಗೊಂಡಿದ್ದರೆ ನಿಮ್ಮನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸ್ವಾಗತಿಸಲಾರದು" ಎಂದು ಸಿಡ್ನಿ ಅಂಗಳದಲ್ಲಿ ನಡೆದ ಘಟನೆಗೆ ಪ್ರತಿಕ್ರಿಯಿಸಿದ್ದಾರೆ.
ಐಸಿಸಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಕ್ರಿಕೆಟ್ ಆಸ್ಟ್ರೇಲಿಯಾ ಇದರ ವರದಿಗಾಗಿ ಕಾಯುತ್ತಿದೆ. ಘಟನೆಗೆ ಕಾರಣಕರ್ತರಾದವರನ್ನು ಪತ್ತೆ ಹಚ್ಚಿದ ಬಳಿಕ ಅವರನ್ನು ಕಿರುಕುಳ ವಿರೋಧಿ ಸಂಹಿತೆಯ ಅಡಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿಕ್ರಿಯಿಸಿದೆ.