
ಈ ಬಾರಿಯ ಐಪಿಎಲ್ನ ಅಂತಿಮ ಹಂತದಲ್ಲಿ ಹರಾಜಿನಲ್ಲಿ ಸಚಿನ್ ತೆಂಡೂಲ್ಕರ್ ಪುತ್ರನ ಹೆಸರು ಕರೆಯಲಾಯಿತು. ನಿರೀಕ್ಷೆಯಂತೆಯೇ ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿ ಮಾಡಿತು. 20 ಲಕ್ಷ ಮೂಲ ಬೆಲೆ ಹೊಂದಿದ್ದ ಅರ್ಜುನ್ಗೆ ಮೂಲ ಬೆಲೆಯನ್ನು ನೀಡಿ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಹಾಕಿಕೊಂಡಿದೆ. ಅದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸ್ವಜನಪಕ್ಷಪಾತರರ ಕೂಗು ಕೇಳಿ ಬಂದಿದೆ.
ಸಿನಿಮಾ ರಾಜಕೀಯ ರಂಗದಲ್ಲಿ ನೆಪೋಟಿಸಮ್ (ಸ್ವಜನಪಕ್ಷಪಾತ) ಮಾತುಗಳು ಸಾಕಷ್ಟು ಸದ್ದು ಮಾಡುತ್ತಿರುತ್ತದೆ. ಆದರೆ ಕ್ರೀಡಾಲೋಕದಲ್ಲಿ ಇದು ಬಹಳ ಕಡಿಮೆ. ಆದರೆ ಈಗ ಸಚಿನ್ ತೆಂಡೂಲ್ಕರ್ ಪುತ್ರನ್ನು ಮುಂಬೈ ಇಂಡಿಯನ್ಸ್ ಕೊಂಡು ಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಐಪಿಎಲ್ ಹರಾಜು ಮುಗಿಯುತ್ತಿದ್ದಂತೆಯೇ ಟ್ವಿಟ್ಟರ್ನಲ್ಲಿ 'ನೆಪೋಟಿಸಮ್' ಟ್ರೆಂಡಿಂಗ್ಗೆ ಬಂದಿತ್ತು. ಭಾರೀ ಪ್ರಮಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಅರ್ಜುನ್ ತೆಂಡೂಲ್ಕರ್ ಹರಾಜಿನ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದರು. ಸಾಕಷ್ಟು ಪ್ರತಿಭಾವಂತರನ್ನು ಕಡೆಗಣನೆ ಮಾಡಿ ಅರ್ಜುನ್ ತೆಂಡೂಲ್ಕರ್ಗೆ ಯಾವ ಆಧಾರದಲ್ಲಿ ಮಣೆ ಹಾಕಲಾಯಿತು ಎಂಬ ಆಕ್ಷೇಪಗಳು ಕೇಳಿ ಬಂದಿದೆ. ಇನ್ನು ಕೆಲವರು ಸಚಿನ್ ತೆಂಡೂಲ್ಕರ್ ಪುತ್ರ ಎಂಬುದನ್ನು ಬಿಟ್ಟು ಈತನ ಸಾಧನೆ ಬೇರೇನಿದೆ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಟೀಕೆಗಳು ಕೇಳಿ ಬರುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅರ್ಜುನ್ ತೆಂಡೂಲ್ಕರ್ ಅವರಲ್ಲಿನ ಪ್ರತಿಭೆಯನ್ನು ನೋಡಿ ಮಾತ್ರವೇ ಅವರನ್ನು ಆಯ್ಕೆ ಮಾಡಿದ್ದೇವೆ ಎಮದು ಕೋಚ್ ಜಯವರ್ಧನೆ ಪ್ರತಿಕ್ರಿಯೆ ನೀಡಿದ್ದಾರೆ