ನವದೆಹಲಿ, ನ.27: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಮುದ್ಗಲ್ ಸಲ್ಲಿಸಿದ ವರದಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತಕಾರಿ ಸುದ್ದಿ ನೀಡಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್ ಶ್ರೀನಿವಾಸನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್ ಈಗಾಗಲೇ ಬಿಸಿಸಿಐ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಿದೆ.
ಚೆನ್ನೈಸೂಪರ್ ಕಿಂಗ್ಸ್ ತಂಡದ ನಿಜವಾದ ಮಾಲೀಕರು ಯಾರು? ಬೆಟ್ಟಿಂಗ್ ಮಾಡಿದ್ದೇನೆ ಎಂದು ಆರೋಪ ಒಪ್ಪಿಕೊಂಡಿರುವ ಮೇಯಪ್ಪನ್ ಅವರು ಶ್ರೀನಿವಾಸನ್ ಅವರ ಸಂಬಂಧಿ ಅಲ್ಲವೇ? ಸಿಎಸ್ ಕೆ ಜೊತೆ ಇರುವ ಇವರ ವಿರುದ್ಧ ಇದುವರೆಗೂ ಬಿಸಿಸಿಐ ಏಕೆ ಕ್ರಮ ಕೈಗೊಂಡಿಲ್ಲ? ಚೆನ್ನೈ ತಂಡವನ್ನು ಏಕೆ ರದ್ದುಗೊಳಿಸಬಾರದು? ಎಂದು ಬಿಸಿಸಿಐಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಯಾವುದೇ ತನಿಖೆ ಹಾಗೂ ವಿಚಾರಣೆ ನಡೆಸದೆ ಸಿಎಸ್ ಕೆ ತಂಡವನ್ನು ರದ್ದುಗೊಳಿಸಬಾರದೇಕೆ ಎಂದು ಕೋರ್ಟ್ ಹೇಳಿದೆ. [ಶ್ರೀನಿವಾಸನ್, ಮೇಯಪ್ಪನ್, ಕುಂದ್ರಾ ಇನ್ ಟ್ರಬಲ್]

ಇಷ್ಟೇ ಅಲ್ಲದೆ, ಇಂಡಿಯಾ ಸಿಮೆಂಟ್ಸ್ ಶ್ರೀನಿವಾಸನ್ ಅವರದ್ದಲ್ಲವೇ? ಇದರಲ್ಲಿ ಎಂಎಸ್ ಧೋನಿ ಪಾತ್ರವೇನು? ಶ್ರೀನಿವಾಸನ್ ಅವರದ್ದು ಕಂಪನಿಯಲ್ಲಿ ಎಷ್ಟು ಷೇರಿದೆ? ಕಂಅಪ್ನಿಗೆ ಸೇರಿದ 400 ಕೋಟಿ ರು ಹೂಡಿಕೆಗೆ ಯಾರು ಅನುಮತಿ ನೀಡಿದರು? ಅಸಲಿಗೆ ಸಿಎಸ್ ಕೆ ಹಾಗೂ ಇಂಡಿಯಾ ಸಿಮೆಂಟ್ಸ್ ಯಾರಿಗೆ ಸೇರಿದೆ ಎಂದು ಪ್ರಶ್ನಿಸಲಾಗಿದೆ. ಜಸ್ಟೀಸ್ ಮುದ್ಗಲ್ ವರದಿ ಅನುಷ್ಠಾನಗೊಳಿಸಿ ಕ್ರಮ ಕೈಗೊಳ್ಳುವಂತೆ ಬಿಸಿಸಿಐಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು