
ಕ್ರಿಕೆಟ್ನಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯೊಂದಕ್ಕೆ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜಂಟಲ್ಮೆನ್ಸ್ ಗೇಮ್ ಆಗಿ ಕ್ರಿಕೆಟ್ ಇನ್ನು ಹೆಚ್ಚುದಿನ ಉಳಿಯಲಾರದು ಎಂದಿದ್ದಾರೆ.
ಇತ್ತೀಚೆಗೆ ಅಂಡರ್19 ವಿಶ್ವಕಪ್ನ ಫೈನಲ್ ಬಳಿಕ ವಿಜೇತ ಬಾಂಗ್ಲಾದೇಶದ ಕ್ರಿಕೆಟಿಗರು ಮತ್ತು ಟೀಮ್ ಇಂಡಿಯಾ ಆಟಗಾರರು ಕಿತ್ತಾಡಿಕೊಂಡ ಘಟನೆ ನಡೆದಿತ್ತು. ಈ ವಿಚಾರವಾಗಿ ಐಸಿಸಿ ಶಿಸ್ತು ಸಮಿತಿ ಐವರು ಕ್ರಿಕೆಟಿಗರ ಮೇಲೆ ಕ್ರಮ ಕೈಗೊಂಡಿತ್ತು. ಮೂವರು ಬಾಂಗ್ಲಾ ಆಟಗಾರರು ಮತ್ತು ಇಬ್ಬರು ಟೀಮ್ ಇಂಡಿಯಾದ ಕ್ರಿಕೆಟಿಗರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ನಾಯಕ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದು ಘಟನೆಗೆ ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಕಿರಿಯ ಆಟಗಾರರು ಮತ್ತು ಬಾಂಗ್ಲಾದೇಶದ ಆಟಗಾರರು ಈ ರೀತಿ ಅಹಿತಕರ ಘಟನೆಯೊಂದರಲ್ಲಿ ಭಾಗಿಯಾಗಿದ್ದು ಭಯಾನಕ ಎಂದಿದ್ದಾರೆ.
1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಈ ಕೆಟ್ಟ ಘಟನೆಯಲ್ಲಿ ಭಾಗಿಯಾದ ಆಟಗಾರರ ವಿರುದ್ಧ ಬಿಸಿಸಿಐ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಈ ಮೂಲಕ ಇತರ ಆಟಗಾರರಿಗೆ ಈ ರೀತಿ ನಡೆದುಕೊಳ್ಳದಂತೆ ಎಚ್ಚರಿಕೆಯನ್ನು ನೀಡುವಂತಾಗಬೇಕು ಎಂದು ಕಪಿಲ್ದೇವ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಪಿಲ್ದೇವ್ ಕ್ರಿಕೆಟನ್ನು ಜಂಟಲ್ಮೆನ್ ಗೇಮ್ ಎಂದು ಯಾರು ಹೇಳಿದರು. ಹಿಂದೆ ಅದು ಜಂಟಲ್ಮೆನ್ ಗೇಮ್ ಆಗಿತ್ತು. ಈಗ ಅಲ್ಲ ಎಂದು ಆಕ್ರೋಶದಿಂದಲೇ ಕಪಿಲ್ದೇವ್ ಹೇಳಿದ್ದಾರೆ.