ಮುಂಬೈ, ಸೆ. 10: ಹಲವಾರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಅವರು ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಬಲಗೈನ ಮಧ್ಯದ ಬೆರಳಿಗೆ ಗಾಯಮಾಡಿಕೊಂಡು ಟೂರ್ನಿಯಿಂದ ರೋಹಿತ್ ಶರ್ಮ ಹೊರ ನಡೆದಿದ್ದರು. ಈಗ ರೋಹಿತ್ ಕೈ ಬೆರಳು ಮುರಿತ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ಜೊತೆಗೆ ಭುಜದ ನೋವು ಕಾಣಿಸಿಕೊಂಡಿದೆ. [ಬೆಂಗಳೂರಿನಲ್ಲಿ ಸಿಎಲ್ ಟಿ20 ಫೈನಲ್ ನಿಗದಿ]
ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ನಾಯಕ ರೋಹಿತ್ ಶರ್ಮ ನೇತೃತ್ವದಲ್ಲಿ ಚಾಂಪಿಯನ್ಸ್ ಲೀಗ್ ಗಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ತರಬೇತಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ನೋವು ಕಾಣಿಸಿಕೊಂಡಿದ್ದು ಎನ್ ಸಿಎ ಫಿಸಿಯೋಥೆರಪಿಸ್ಟ್ ಗಳ ಸಲಹೆಯ ಮೇರೆಗೆ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ಮುಂದಿನ ವಾರ ಮತ್ತೆ ಬೆಂಗಳೂರಿಗೆ ಬರಲಿರುವ ರೋಹಿತ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಚಾಂಪಿಯನ್ಸ್ ಲೀಗ್ ನಿಂದ ಹೊರ ನಡೆದಿರುವ ರೋಹಿತ್ ಶರ್ಮ ಅವರು ಅಕ್ಟೋಬರ್ 8 ರಿಂದ ಕೊಚ್ಚಿಯಲ್ಲಿ ಪ್ರವಾಸಿ ವೆಸ್ಟ್ಇಂಡೀಸ್ ವಿರುದ್ಧ ನಡೆಯುವ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಲಭ್ಯವಾಗುವುದು ಅನುಮಾನ ಎನಿಸಿದೆ. [ಅಜ್ಮಲ್ ಇನ್ಮುಂದೆ ಬೌಲ್ ಮಾಡುವಂತಿಲ್ಲ]

ಚಾಂಪಿಯನ್ಸ್ ಗೆ ನಾಯಕನ ಕೊರತೆ: 2013ರ ಐಪಿಲ್ ನಲ್ಲಿ ರಿಕ್ಕಿ ಪಾಂಟಿಂಗ್ ನಂತರ ಮುಂಬೈ ಇಂಡಿಯನ್ಸ್ನ ಸಾರಥ್ಯ ವಹಿಸಿಕೊಂಡ ರೋಹಿತ್ ಶರ್ಮ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ಸ್ ಪಟ್ಟವನ್ನು ತಂದುಕೊಟ್ಟಿದ್ದರು. ಆದರೆ, ಕಳೆದ ಐಪಿಎಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು.
ಸೆ.17ರಿಂದ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಮುನ್ನಡೆಸುವವರು ಯಾರು? ಎಂಬ ಪ್ರಶ್ನೆ ಎದ್ದಿದೆ. ಭಾರತದ ಹರ್ಭಜನ್ ಸಿಂಗ್, ವೆಸ್ಟ್ಇಂಡೀಸ್ ನ ಕೀರನ್ ಪೊಲಾರ್ಡ್, ಶ್ರೀಲಂಕಾದ ಲಸಿಂತ್ ಮಾಲಿಂಗರ ಹೆಸರು ಕೇಳಿಬರುತ್ತಿವೆ.[ಕೊಹ್ಲಿಗೆ ಈಗ ಪ್ರಥಮ ಬಾರಿಗೆ ಪಟ್ಟಕ್ಕೇರಿದ ಖುಷಿ]
2011ರ ಚಾಂಪಿಯನ್ಸ್ ಲೀಗ್ ನಲ್ಲಿ ಮುಂಬೈ ತಂಡವನ್ನು ಹರ್ಭಜನ್ ಸಿಂಗ್ ಪ್ರತಿನಿಧಿಸಿದ್ದರು. ಪೋಲಾರ್ಡ್ ಅವರು ಬಾರ್ಬಡೋಸ್ ಟ್ರೆಡೆಂಟ್ ತಂಡಕ್ಕೆ ನಾಯಕರಾಗಿ ಅನುಭವ ಹೊಂದಿದ್ದರೆ, ಮಾಲಿಂಗ ಸಾರಥ್ಯದಲ್ಲಿ ಶ್ರೀಲಂಕಾ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿರುವುದನ್ನು ಮರೆಯುವಂತಿಲ್ಲ. ಮುಂಬೈ ತಂಡ ಸೆಪ್ಟೆಂಬರ್ 13 ರಂದು ಪಾಕಿಸ್ತಾನ ಮೂಲದ ಮೊಹಮ್ಮದ್ ಹಫೀಜ್ ನಾಯಕತ್ವದ ಲಾಹೋರ್ ಲಯನ್ಸ್ ವಿರುದ್ಧ ಸೆಣಸಲಿದೆ.[ಟಿ20: ಸ್ಪಿನ್ನರ್ ಸುನಿಲ್ 'ಸೂಪರ್' ವಿಶ್ವದಾಖಲೆ]
ಮುಂಬೈ ತಂಡ: ಹರ್ಭಜನ್ ಸಿಂಗ್, ಅಂಬಟಿ ರಾಯುಡು, ಪ್ರಗ್ನಾನ್ ಓಜಾ, ಪ್ರವೀಣ್ ಕುಮಾರ್, ಆದಿತ್ಯಾ ತಾರೆ, ಜಲಜ್ ಸಕ್ಸೇನಾ, ಜಸ್ಪ್ರೀತ್ ಬರುವಾ, ಶ್ರೇಯಸ್ ಗೋಪಾಲ್, ಮೈಕ್ ಹಸ್ಸಿ, ಕಿರಾನ್ ಪೊಲ್ಲಾರ್ಡ್, ಕೋರಿ ಆಂಡರ್ಸನ್, ಲಸಿತ್ ಮಾಲಿಂಗ, ಡಿ ಲಾಂಜ್, ಲೆಂಡ್ಲ್ ಸಿಮನ್ಸ್