ಬೆಂಗಳೂರು, ಜೂ.30: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ವಾಲ್ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಅವರು ಸೋಮವಾರ ಇಂಗ್ಲೆಂಡಿನಲ್ಲಿರುವ ಟೀಂ ಇಂಡಿಯಾ ಸೇರಲಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಸಲಹೆಗಾರರನ್ನಾಗಿ ದ್ರಾವಿಡ್ ರನ್ನು ನೇಮಿಸಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಟ್ರೆಂಟ್ ಬ್ರಿಡ್ಜ್ ನಲ್ಲಿ ಜು.9 ರಂದು ಮೊದಲ ಟೆಸ್ಟ್ ಪಂದ್ಯವಾಡುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ.[ಅಂಗ್ಲರ ಬೇಟೆಗೆ ಹೊರಟ ಧೋನಿ ಪಡೆ]
ಕೋಚ್ ಡಂಕನ್ ಫ್ಲೆಚ್ಚರ್ ಇದ್ದರೂ ರಾಹುಲ್ ದ್ರಾವಿಡ್ ಆಯ್ಕೆ ಏಕೆ? ಎಂಬ ಪ್ರಶ್ನೆ ಎದ್ದಿದ್ದು ಇದಕ್ಕೆ ಉತ್ತರವೂ ಸಿಕ್ಕಿದೆ. ದ್ರಾವಿಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸುವಂತೆ ಸ್ವತಃ ಮುಖ್ಯ ಕೋಚ್ ಡಂಕನ್ ಅವರೇ ಬಿಸಿಸಿಐಗೆ ಸೂಚಿಸಿದ್ದರಂತೆ. ಅದರಂತೆ, ಬಿಸಿಸಿಐ ಮೊದಲ ಬಾರಿಗೆ ಹೊಸ ಜವಾಬ್ದಾರಿಯುತ ಹುದ್ದೆಯನ್ನು ಸೃಷ್ಟಿಸಿ ಸಮರ್ಥ ವ್ಯಕ್ತಿಗೆ ಅಧಿಕಾರ ನೀಡಿದೆ.
ಅಲ್ಲದೆ ಕಳೆದ ಬಾರಿ 2011ರಲ್ಲಿ ಟೀಂ ಇಂಡಿಯಾವನ್ನು 0-4 ರಲ್ಲಿ ಬಗ್ಗುಬಡಿದು ಬೀಗಿದ್ದ ಇಂಗ್ಲೆಂಡ್ ತಂಡಕ್ಕೆ ತಲೆನೋವಾಗಿದ್ದು ರಾಹುಲ್ ದ್ರಾವಿಡ್ ಮಾತ್ರ. ದ್ರಾವಿಡ್ ಮೂರು ಶತಕ ಸಿಡಿಸಿ ಸರಣಿಯ ಏಕೈಕ ಆಶಾಕಿರಣವಾಗಿದ್ದರು. ಅಲ್ಲದೆ, ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ತರಬೇತಿ ನೀಡಿದ ಅನುಭವವೂ ದ್ರಾವಿಡ್ ಗೆ ಪ್ಲಸ್ ಪಾಯಿಂಟ್ ಆಗಿದೆ.

ಬಿಸಿಸಿಐ ಸ್ಪಷ್ಟನೆ: ದ್ರಾವಿಡ್ ಅವರು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಸಲಹೆಗಾರರಾಗಿ ನೇಮಕಗೊಂಡಿದ್ದು, ಇಂಗ್ಲೆಂಡ್ ಪ್ರವಾಸ ಮುಕ್ತಾಯ ತನಕ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವ ಉಳ್ಳವರಾಗಿದ್ದು, ಯುವ ಆಟಗಾರರಿಗೆ ಉತ್ತೇಜನ ನೀಡಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ ಎಂದು ಬಿಸಿಸಿಐನ ಕಾರ್ಯದರ್ಶಿ ಸಂಜಯ್ಪಟೇಲ್ ತಿಳಿಸಿದ್ದಾರೆ.
ಭಾರತ ತಂಡದ ಕೋಚ್ ಡೆಂಕನ್ಪ್ಲೆಂಚರ್ ಅವರು ದ್ರಾವಿಡ್ ಅವರ ಹೆಸರನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ರಾವಿಡ್ ಅವರು ಸಹ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರ ಸೇವೆ ತಂಡಕ್ಕೆ ಲಭಿಸಲಿದೆ ಎಂದು ಸಂಜಯ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಮಾರ್ಚ್ನಲ್ಲಿ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ದ್ರಾವಿಡ್ ಅವರನ್ನು ಕೋಚ್ ಸ್ಥಾನಕ್ಕೆ ನೇಮಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದರು. ಆದರೆ, ಬಿಸಿಸಿಐ ಆಗ ಈ ಸಲಹೆಯನ್ನು ನಿರಾಕರಿಸಿತ್ತು.
ದ್ರಾವಿಡ್ ಒಬ್ಬ ಪ್ರತಿಭಾನ್ವಿತ ಕ್ರಿಕೆಟಿಗನಾಗಿ ಮತ್ತು ನಾಯಕನಾಗಿ ವೆಸ್ಟ್ಇಂಡೀಸ್ ಮತ್ತು ಇಂಗ್ಲೆಂಡ್ ಸರಣಿಯನ್ನು ಗೆದ್ದಿರುವುದು ಸಾಕ್ಷಿಯಾಗಿದೆ. ಇವರನ್ನು ತಂಡದ ಸಲಹೆಗಾರರನ್ನಾಗಿ ನೇಮಿಸುವುದರಿಂದ ತಂಡಕ್ಕೆ ಮತ್ತಷ್ಟು ಬಳ ಬಂದಂತಾಗಿದೆ ಎಂದು ಗವಾಸ್ಕರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಂತರ ಗವಾಸ್ಕರ್ ಅವರು ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ, ಐಪಿಎಲ್ 7 ಸಿಇಒ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.