
ಕೊರೊನಾವೈರಸ್ ಕಾರಣದಿಂದಾಗಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ರದ್ದಾಗುವ ಭಿತಿಯನ್ನು ಎದುರಿಸಿತ್ತು. ಆದರೆ ಬಿಸಿಸಿಐ ಈ ಪ್ರವಾಸವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಿದ್ದು ಭಾರತ ಮುಂದಿನ ಗುರುವಾರ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಳ್ಳಲಿದೆ. ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹರ್ಷ ವ್ಯಕ್ತಪಡಿಸಿದ್ದು ಇದರಿಂದಾಗಿ ಈ ಎರಡು ಕ್ರಿಕೆಟ್ ಮಂಡಳಿಗಳ ಮಧ್ಯೆ ಎಷ್ಟು ಉತ್ತಮವಾದ ಬಾಂಧವ್ಯ ಇದೆ ಎಂಬುದು ಅರ್ಥವಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಲಾವ್ಸನ್ ನಾಯ್ಡೋ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಅವರು ಈ ಸರಣಿಲ್ಲಿ ಎರಡು ತಂಡಗಳು ಕೂಡ ಪೈಪೋಟಿಯ ಸ್ಪರ್ಧೆಯನ್ನು ಎದುರಿಸಲಿದೆ. ಅದಕ್ಕೆ ಪೂರಕವಾಗಿರುವ ವಾತಾವರಣವನ್ನು ಸಿದ್ಧಪರಿಸಲಾಗಿದೆ. ಕೊರೊನಾವೈರಸ್ನ ಓಮಿಕ್ರಾನ್ ರೂಪಾಂತರಿಯಿಂದ ಯಾವುದೇ ಅಡ್ಡಿಯಾಗುವುದಿಲ್ಲ, ಬಿಸಿಸಿಐ ಈ ವ್ಯೂಹಕ್ಕೆ ಬೀಳದೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಪ್ಪಿಕೊಂಡಿರುವುದು ನಮಗೆ ಸಂತಸವನ್ನುಂಟು ಮಾಡಿದೆ ಎಂದು ಲಾವ್ಸನ್ ನಾಯ್ಡೋ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಲಾವ್ಸನ್ ನಾಯ್ಡೋ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲಿನ ನಿರೀಕ್ಷೆಗಳ ಬಗ್ಗೆಯೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಮಿಕ್ರಾನ್ ರೂಪಾಂತರಿ ವೈರಸ್ನಿಂದಾಗಿ ಈ ಸರಣಿ ಎಷ್ಟಯ ಸವಾಲಾಗಿದೆ, ಪ್ರೇಕ್ಷಕರನ್ನು ಈ ಸರಣಿಯಲ್ಲಿ ನಿರೀಕ್ಷಿಸಬಹುದೇ? ಹಾಗೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಸಂಬಂಧ 30 ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ಅದನ್ನು ಆಚರಿಸಲು ಯಾವ ರೀತಿಯಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬುದನ್ನು ಅಲಾವ್ಸನ್ ನಾಯ್ಡೋ ಮಾತನಾಡಿದ್ದಾರೆ.
"ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಕ್ರಿಕೆಟ್ ಸಂಬಂಧ ಬೆಸೆದುಕೊಂಡು 30 ವರ್ಷಗಳಾಗಿದೆ. 1991ರಲ್ಲಿ ದಕ್ಷಿಣ ಆಫ್ರಿಕಾ ಐಸಿಸಿಗೆ ಮರಳಿ ಸೇರ್ಪಡೆಯಾದಾಗ ನಮ್ಮ ಮೊದಲ ಪ್ರವಾಸವನ್ನು 1991ರಲ್ಲಿ ಭಾರತಕ್ಕೆ ಕೈಗೊಂಡಿದ್ದೆವು. ಅದಾದ ನಂತರ ಭಾರತ ಮುಂದಿನ ವರ್ಷ ನಾಲ್ಕು ಟೆಸ್ಟ್ ಮತ್ತು ಏಳು ಏಕದಿನ ಪಂದ್ಯಗಳಿಗಾಗಿ 1992-93 ರಲ್ಲಿ ಪ್ರವಾಸ ಕೈಗೊಂಡಿತ್ತು. ಈಗ ನಾವು ಈ ಸರಣಿಯ ಬಗ್ಗೆ ಸಾಕಷ್ಟು ಉತ್ಸುಕವಾಗಿದ್ದೇವೆ. ಟಿ20 ಸರಣಿಯನ್ನು ನಂತರ ಆಡಲಾಗುತ್ತದೆ. ಆದರೆ ಮುಂಬರುವ ಈ ಸರಣಿಯ ಸಾಕಷ್ಟು ಪೈಪೋಟಿಯಿಂದ ಇರಲಿದೆ" ಎಂದು ಲಾವ್ಸನ್ ನಾಯ್ಡೋ ಹೇಳಿಕೊಂಡಿದ್ದಾರೆ.
"ನಾವು ಈ ಸರಣಿಯನ್ನು ಸುರಕ್ಷಿತವಾಗಿ ನಡೆಸಲು ಪೂರಕವಾಗಿರುವಂತೆ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದೇವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರ ಆರೋಗ್ಯದ ಮೇಲೆ ನಾವು ಮೊದಲ ಆದ್ಯತೆಯನ್ನು ನೀಡುತ್ತಿದ್ದೇವೆ. ಈ ಸರಣಿಯನ್ನು ಬಯೋಬಬಲ್ ವಾತಾವರಣದಲ್ಲಿ ನಡೆಸಲಾಗುತ್ತಿದ್ದು ಭಾರತ ತಂಡ ಚಾರ್ಟರ್ಫ್ಲೈಟ್ ಮೂಲಕ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ" ಎಂದು ಅವರು ಮಾಹಿತಿ ನೀಡಿದರು.
ಕೊರೊನಾವೈರಸ್ನ ಕಾರಣದಿಂದಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಕೆಲ ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದೆ. ಸರಣಿಯನ್ನು ನಿಗದಿಗಿಂತ ಒಂಬತ್ತು ದಿನಗಳ ನಂತರ ಆರಂಭಿಸಲಾಗುತ್ತಿದ್ದು ಟೆಸ್ಟ್ ಹಾಗೂ ಏಕದಿನ ಸರಣಿ ಮಾತ್ರವೇ ಈ ಪ್ರವಾಸದ ಭಾಗವಾಗಿದೆ. ಟಿ20 ಸರಣಿಯನ್ನು ಸದ್ಯಕ್ಕೆ ಮುಂದೂಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜನ್ ನಾಗ್ವಾಸ್ವಾಲ್ಲಾ