
ನವದೆಹಲಿ: ಬಿಜೆಪಿ ಎಂಪಿ, ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿಯಲ್ಲಿ 1 ರೂ.ಗೆ ಊಟದ ಕ್ಯಾಂಟೀನ್ ಆರಂಭಿಸಲಿದ್ದಾರೆ. 'ಜನ್ ರಸೋಯ್' ಎಂಬ ಹೆಸರಿನ ಈ ಕ್ಯಾಂಟೀನ್ ಗಂಭೀರ್ ಸಂಸದೀಯ ಕ್ಷೇತ್ರದ ಬಡ ಜನರಿಗೆ ನೆರವಾಗಲಿದೆ.
ರಾಜಕಾರಣಕ್ಕಿಳಿದಿರುವ ಕ್ರಿಕೆಟರ್ ಗಂಭೀರ್ 'ಜನ್ ರಸೋಯ್' ರೀತಿಯ ಕ್ಯಾಂಟೀನನ್ನೇ ಗುರುವಾರ (ಡಿಸೆಂಬರ್ 24) ಗಾಂಧೀನಗರದಲ್ಲಿ ಉದ್ಘಾಟಿಸಿದ್ದಾರೆ. ಇನ್ನು ಜನವರಿ 26ರಂದು ಪ್ರಜಾಪ್ರಭುತ್ವ ದಿನದಂದು ಅಶೋಕನಗರದಲ್ಲಿ ಮತ್ತೊಂದು ಕ್ಯಾಂಟೀನ್ ಉದ್ಘಾಟಿಸಲಿದ್ದಾರೆ ಎಂದು ಅವರ ಅಚೇರಿ ಮೂಲ ತಿಳಿಸಿದೆ.
'ಜಾತಿ, ಮತ, ಧರ್ಮ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ರತಿಯೊಬ್ಬರಿಗೂ ಒಳ್ಳೆಯ ಮತ್ತು ಆರೋಗ್ಯಕರ ಆಹಾರದ ಹಕ್ಕಿದೆ ಎಂದು ನಾನು ಯಾವಾಗಲೂ ಭಾವಿಸಿದ್ದೇನೆ. ನಿರ್ಗತಿಕರು, ಮನೆ ಇಲ್ಲದವರು ದಿನದ ಎರಡು ಹೊತ್ತಿನ ಊಟಕ್ಕೂ ಪರದಾಡುವುದನ್ನು ನೋಡೋಕೆ ಬೇಸರವಾಗುತ್ತದೆ,' ಎಂದು ಗಂಭೀರ್ ಹೇಳಿದ್ದಾರೆ.
ಪೂರ್ವ ದೆಹಲಿಯಲ್ಲಿ ಪ್ರತೀ 10 ಸಂಸದೀಯ ಕ್ಷೇತ್ರಗಳಿಗೆ ಕನಿಷ್ಠ ಒಂದು 'ಜನ್ ರಸೋಯ್' ಕ್ಯಾಂಟೀನ್ ತೆರೆಯಲು ಎಂಪಿ ಗಂಭೀರ್ ಯೋಜನೆ ಹಾಕಿಕೊಂಡಿದ್ದಾರೆ ಎಂದು ಎನ್ನಲಾಗಿದೆ. ಟೀಮ್ ಇಂಡಿಯಾ ಪರ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4154 ರನ್, 147 ಏಕದಿನ ಪಂದ್ಯಗಳಲ್ಲಿ 5238 ರನ್, 37 ಟಿ20ಐ ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ.