ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಡಿ ಪಂದ್ಯವು ಇಂದು (ಗುರುವಾರ) ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 13 ವರ್ಷಗಳ ನಂತರ ರಣಜಿ ಟ್ರೋಫಿ ಟೂರ್ನಿಗೆ ಮರಳಿದ್ದು, ದೆಹಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಕ್ರೇಜ್ ಕಡಿಮೆಯಾಗಿಲ್ಲ. ಅರುಣ್ ಜೇಟ್ಲಿ ಸ್ಟೇಡಿಯಂ ಕ್ರಿಕೆಟ್ ಅಭಿಮಾನಿಗಳಿಂದ ಕ್ಕಿಕಿರಿದು ತುಂಬಿದೆ. ಇದಕ್ಕೆ ಕಾರಣ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಆಟವನ್ನು ನೋಡಿ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸೇರಿದ್ದಾರೆ. ಇಷ್ಟು ದಿನ ಟಿವಿಯಲ್ಲಿ ತಮ್ಮ ನೆಚ್ಚಿನ ಆಟಗಾರನ ಬ್ಯಾಟಿಂಗ್ ನೋಡುತ್ತಿದ್ದವರು, ಇಂದು ಲೈವ್ ಆಗಿ ನೋಡಲು ಸ್ಟೇಡಿಯಂಗೆ ಬಂದಿದ್ದಾರೆ. ಸ್ಟೇಡಿಯಂನಲ್ಲಿ ಕ್ಕಿಕಿರಿದು ಸೇರಿರುವ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ ಹೆಸರನ್ನು ಜಪಿಸುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಲು ಬಂದ ಅಭಿಮಾನಿಗಳಿಗೆ ಮೊದಲ ದಿನವೇ ನಿರಾಸೆಯಾಗಿದೆ.

ಈ ಪಂದ್ಯದಲ್ಲಿ ದೆಹಲಿ ತಂಡದ ನಾಯಕ ಆಯುಷ್ ಬದೋನಿ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ರೈಲ್ವೇಸ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೂ ಮೈದಾನದಲ್ಲಿ ಕೊಹ್ಲಿ ಫೀಲ್ಡಿಂಗ್ ಮಾಡುವುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಸೇರಿದ್ದಾರೆ.
ದೆಹಲಿ ಮತ್ತು ರೈಲ್ವೇಸ್ ನಡುವಿನ ಪಂದ್ಯಕ್ಕಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಸ್ಟೇಡಿಯಂನ ಕೆಲವು ಸ್ಟ್ಯಾಂಡ್ಗಳನ್ನು ತೆರೆದಿದೆ. ಅಭಿಮಾನಿಗಳು ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಅಭಿಮಾನಿಗಳು ತಮ್ಮ ಮೂಲ ಆಧಾರ್ ಕಾರ್ಡ್ ಅನ್ನು ಅದರ ಪ್ರತಿಯೊಂದಿಗೆ ತೋರಿಸುವ ಮೂಲಕ ಉಚಿತವಾಗಿ ಸ್ಟೇಡಿಯಂ ಅನ್ನು ಪ್ರವೇಶಿಸಬಹುದು. ಹೀಗಾಗಿ ವಿರಾಟ್ ಕೊಹ್ಲಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಆಗಮಿಸಿದ್ದಾರೆ.
ಈ ವೇಳೆ ಕೊಹ್ಲಿ ರಣಜಿ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂನ ಒಳಗೆ ಮತ್ತು ಹೊರಗೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪ್ಯಾರಾ ಮಿಲಿಟರಿ ಪಡೆಯನ್ನು ಸಹ ನಿಯೋಜಿಸಲಾಗಿದೆ. ವಿರಾಟ್ ಕೊಹ್ಲಿ ಕ್ರೇಜ್ ನಿಂದಾಗಿ ಮೈದಾನದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.