
ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ ತೀವ್ರತೆ ಹೆಚ್ಚಾಗುತ್ತಿದೆ. ಹೊಸ ಕೊರೊಣಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಅದರಲ್ಲೂ ಕಳೆದ ಮಂಗಳವಾರ 4,373 ಹೊಸ ಪ್ರಕರಣಗಳು ದಾಖಲಾಗಿದ್ದರೆ ಒಂದೇ ದಿನದಲ್ಲಿ ಅಂದರೆ ಬುಧವಾರ ಅದು ಬಹುತೇಕ ದುಪ್ಪಟ್ಟಾಗಿದೆ. ಬುಧವಾರ ದಕ್ಷಿಣ ಆಫ್ರಿಕಾ ದೇಶದಲ್ಲಿ 8561 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗುವ ಮೂಲಕ ಆತಂಕ ಮೂಡಿಸಿದೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಒಮಿಕ್ರಾನ್ ರೂಪಾಂತರಿಯೇ ಆಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ವೈರಸ್ ನಿಯಂತ್ರಣಕ್ಕೆ ಮತ್ತಷ್ಟು ನಿರ್ಬಂಧಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇದರ ಭಾಗವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಲ್ಲಿನ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೆಲ ಆಟಗಾರರು ಕೂಡ ಕೊರೊನಾವೈರಸ್ಗೆ ತುತ್ತಾಗಿರುವುದು ಮಂಡಳಿ ಈ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತೊಂದು ಪ್ರಮುಖ ಕಾರಣವಾಗಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿ ಡಿಸೆಂಬರ್ 17ರಿಂದ ಆರಂಭವಾಗಬೇಕಿರುವ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹಾಗೂ ಬಿಸಿಸಿಐ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಶೀಘ್ರದಲ್ಲಿಯೇ ಬಿಸಿಸಿಐ ಈ ಪ್ರವಾಸದ ಬಗ್ಗೆ ನಿರ್ಧಾರ ತೆಗೆದುಕೊಳ್ಳಿವ ಸಾಧ್ಯತೆಯಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ ಈ ಸರಣಿ ಸದ್ಯ ಒಂದು ವಾರಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರಿ ಕೊರೊನಾವೈರಸ್ನ ಪ್ರಕರಣಗಳ ಹೆಚ್ಚಳದಿಂದಾಗಿ ವಿಶ್ವಾದ್ಯಂತ ಈಗ ಭಯದ ವಾತಾವರಣವಿದೆ. ಹೀಗಾಗಿ ಈ ಪರಿಸ್ಥಿತಿ ಈಗ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೇಲೆಯೂ ಕರಿಛಾಯೆ ಆವರಿಸುವಂತೆ ಮಾಡಿದೆ.
ಇನ್ನು ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಸರಣಿ ನಡೆಯುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಸರಣಿ ಈವರೆಗೂ ಚಾಲ್ತಿಯಲ್ಲಿದ್ದು ನಡೆಯುವ ಬಗ್ಗೆ ಆಶಾ ಭಾವನೆ ವ್ಯಕ್ತಪಡಿಸಿದ್ದರು. ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಮಾತನಾಡಿ "ನಾವು ಕ್ರಿಕೆಟ್ ದಕ್ಷಿಣ ಆಪ್ರಿಕಾದ ಜೊತೆಗೆ ಇದ್ದೇವೆ. ಆದರೆ ಪ್ರಮುಖ ವಿಷಯವೆಂದರೆ ನಾವು ಆಟಗಾರರ ಸುರಕ್ಷತೆಯಲ್ಲಿ ರಾಜಿಯಾಗಲಾರೆವು. ಈವರೆಗೆ ತೀರ್ಮಾನ ಕೈಗೊಂಡಿರುವಂತೆ ಆಟಗಾರರು ಚಾರ್ಟರ್ಡ್ ವಿಮಾನದ ಮೂಲಕ ಜೋಹನ್ಸ್ಬರ್ಗ್ಗೆ ತೆರಳಿ ಬಯೋಬಬಲ್ಗೆ ಸೇರ್ಪಡೆಯಾಗಲಿದ್ದಾರೆ" ಎಂದು ಪಿಟಿಐಗೆ ವಿವರಿಸಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾದೊಂದಿಗೆ ನಾವು ಸತತವಾಗಿ ಸಂಪರ್ಕದಲ್ಲಿದ್ದು ಸರಣಿಯಲ್ಲಿ ರಾಜಿ ಮಾಡಿಕೊಳ್ಳದಿರಲು ನಮ್ಮ ಕೈಯ್ಯಲ್ಲಿ ಸಾಧ್ಯವಿರುವ ಪ್ರಯತ್ನ ನಡೆಸಲಿದ್ದೇವೆ. ಪರಿಸ್ಥಿತಿ ಉಲ್ಬಣಗೊಂಡರೆ ಆಟಗಾರರ ಸುರಕ್ಷತೆಯನ್ನು ನಾವು ಪರಿಗಣಿಸಬೇಕಿದೆ" ಎಂದು ಅರುಣ್ ಧುಮಲ್ ಹೇಳಿದ್ದಾರೆ.
ಡಿಸೆಂಬರ್ ಮಧ್ಯಭಾಗದಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸರಣಿ ಆರಂಭವಾಗಲಿದ್ದು ಡಿಸೆಂಬರ್ 8 ಅಥವಾ 9ಕ್ಕೆ ಟೀಮ್ ಇಂಡಿಯಾ ಮುಂಬೈನಿಂದ ಜೋಹನ್ಸ್ಬರ್ಗ್ಗೆ ಪ್ರಯಾಣ ಬೆಳೆಸಲು ತಿರ್ಮಾನಿಸಲಾಗಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 7ರಂದು ಅಂತ್ಯವಾಗಲಿದ್ದು ನಂತರ ಭಾರತ ತಂಡ ದಕ್ಷಿಣ ಆಫ್ರಿಕಾಗೆ ಪ್ರವಾಸಕ್ಕೆ ನಿರ್ಧಾರ ಮಾಡಲಾಗಿದೆ. ಈಗ ಇದು ಅನಿಶ್ಚಿತತೆಯಲ್ಲಿದೆ,
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಟೆಸ್ಟ್ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಲ್ಲಿ ಮುಖಾಮುಖಿಯಾಗಬೇಕಿದೆ. ಮೊದಲಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಅದಾದ ಬಳಿಕ ನಾಲ್ಕು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 17ರಿಂದ ಆರಂಭವಾಗಿ ಜನವರಿ 26ರವರೆಗೆ ಈ ಸರಣಿ ನಡೆಯಲಿದೆ. ಈ ಮಧ್ಯೆ ಭಾರತ 'ಎ' ತಂಡ ಈಗಾಗಲೇ ದಕ್ಷಿಣ ಆಫ್ರಿಕಾಗೆ ಈಗಾಗಲೇ ಪ್ರವಾಸ ಕೈಗೊಂಡಿದ್ದು ಅಲ್ಲಿ ನಾಲ್ಕು ದಿನಗಳ ಮೂರು ಅನಧಿಕೃತ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದೆ. ಈ ತಂಡವನ್ನು ಕೂಡ ಬಿಸಿಸಿಐ ವಾಪಾಸ್ ಕರೆಸಿಕೊಳ್ಳದೆ ಸರಣಿಯನ್ನು ಮುಂದುವರಿಸಲು ನಿರ್ಧರಿಸಿತ್ತು.