

ಚೆನ್ನೈ, ಮಾರ್ಚ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯದ ಸಂಭಾವನೆಯನ್ನು ಪುಲ್ವಾಮಾ ದಾಳಿಯಲ್ಲಿ ಅಸುನೀಗಿದ ಭಾರತೀಯ ಯೋಧರ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ.
ಮಾರ್ಚ್ 23ರಂದು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಈ ಪಂದ್ಯದ ಗಳಿಕೆಯನ್ನು ಸಿಎಸ್ಕೆ ಮೃತ ಸೈನಿಕರ ಕುಟುಂಬಗಳಿಗೆ ನೀಡಲಿದೆ. ಸಿಎಸ್ಕೆ ನಾಯಕ ಎಂಎಸ್ ಧೋನಿ ಚೆಕ್ ವಿತರಿಸಲಿದ್ದಾರೆ.
'ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ ಆರಂಭಿಕ ಪಂದ್ಯದ ಟಿಕೆಟ್ ಹಣ ಪುಲ್ವಾಮಾ ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಕುಟುಂಬಗಳಿಗೆ ತಲುಪಲಿದೆ.ಸಿಎಸ್ಕೆ ನಾಯಕ, ಭಾರತ ಪ್ರಾದೇಶಿಕ ಸೇನೆಯ ಗೌರವ ಲೆಫ್ಟಿನೆಂಟ್ ಕೊಲೊನೆಲ್ ಆಗಿರುವ ಎಂಎಸ್ ಧೋನಿ ಚೆಕ್ ವಿತರಿಸಲಿದ್ದಾರೆ' ಎಂದು ಸಿಎಸ್ಕೆ ನಿರ್ದೇಶಕ ರಾಕೇಶ್ ಸಿಂಗ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಐಪಿಎಲ್ 12ನೇ ಆವೃತ್ತಿಯ ಆರಂಭಿಕ ಪಂದ್ಯದ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಹಣವನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದಿದ್ದ ಉಗ್ರರ ದಾಳಿಯಲ್ಲಿ ಮೃತರಾದ ಭಾರತೀಯ ಸೈನಿಕರ ಕುಟುಂಬಗಳಿಗೆ ಚೆನ್ನೈ ತಂಡ ನಿರ್ಧರಿಸಿದೆ.