18ನೇ ಆವೃತ್ತಿಯ ಐಪಿಎಲ್ನ 22ನೇ ಪಂದ್ಯದಲ್ಲಿ ಮುಲ್ಲನ್ಪುರ ನಡೆಯಲಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡದ ಸವಾಲು ಎದುರಿಸಲಿದೆ. ಐಪಿಎಲ್ನಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿರುವ ಚೆನ್ನೈ ಗೆಲುವಿನ ಟ್ರ್ಯಾಕ್ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 50 ರನ್ಗಳ ಸೋಲು ಕಂಡಿರುವ ಪಂಜಾಬ್, ತವರಿನಲ್ಲಿ ಅಬ್ಬರಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಉಭಯ ತಂಡಗಳಲ್ಲೂ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ.
ಚೆನ್ನೈ ಹಾಗೂ ಪಂಜಾಬ್ ತಂಡಗಳು ಈಗಾಗಲೇ ಐಪಿಎಲ್ನಲ್ಲಿ ಒಟ್ಟಾರೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸಿಎಸ್ಕೆ 16, ಪಂಜಾಬ್ 14 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಉಭಯ ತಂಡಗಳು ಮೈದಾನಕ್ಕೆ ಇಳಿದಾಗ 240 ರನ್ ಗರಿಷ್ಠ ಸ್ಕೊರ್ ಆಗಿದೆ.

ಈ ಪಿಚ್ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟ್ ಮಾಡುವ ನಿರ್ಣಯವನ್ನು ಕೈಗೊಳ್ಳಲಿದೆ. ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಸ್ಕೋರ್ ಕಲೆ ಹಾಕಿ ಎದುರಾಳಿ ತಂಡದ ಮೇಲೆ ಒತ್ತಡವನ್ನು ಹೇರಲು ಬಯಸುತ್ತದೆ. ಹೊಸದಾಗಿ ನಿರ್ಮಿಸಲಾದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದುವರೆಗೆ ಕೇವಲ ಆರು ಐಪಿಎಲ್ ಪಂದ್ಯಗಳನ್ನು ಆಡಲಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡವು ಮೂರು ಪಂದ್ಯಗಳನ್ನು ಗೆದ್ದಿದ್ದು, ಚೇಸ್ ಮಾಡಿದ ತಂಡ 3 ಪಂದ್ಯಗಳನ್ನು ಗೆದ್ದು ಬೀಗಿದೆ.
ರುತುರಾಜ್ ಗಾಯಕ್ವಾಡ್ ಅವರು ಈ ಲೀಗ್ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮ ತಂಡದ ಮೇಲೆ ಆಗುತ್ತಿದೆ. ತಂಡದ ಬ್ಯಾಟಿಂಗ್ ಸಂಯೋಜನೆಯಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ರುತುರಾಜ್ ಗಾಯಕ್ವಾಡ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಬಿಗ್ ಸ್ಕೊರ್ ಕಲೆ ಹಾಕಬಹುದು. ಇನ್ನು ಒಂದೆರಡು ಬದಲಾವಣೆಗಳನ್ನು ಸಹ ಮಾಡಿಕೊಂಡರೆ ಒಳ್ಳೆಯದು. ಈ ವೇಳೆ ಡೇನ್ ಕಾನ್ವೆ, ರಚಿನ್ ರವೀಂದ್ರ, ಶಿವಂ ದುಬೆ, ವಿಜಯ್ ಶಂಕರ್ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಸಿಎಸ್ಕೆ ತಂಡದ ನೂರ್ ಅಹ್ಮದ್ ಬಿಗುವಿನ ದಾಳಿ ನಡೆಸುತ್ತಿದ್ದು, ಮುಕೇಶ್ ಚೌಧರಿ, ಖಲೀಲ್ ಅಹ್ಮದ್ ತಮ್ಮ ವೇಗದ ದಾಳಿಯಿಂದ ಎದುರಾಳಿಗಳನ್ನು ಕಾಡಬೇಕಿದೆ. ಅಂದಾಗ ಗೆಲುವಿನ ಕನಸು ನನಸಗುತ್ತದೆ.

ಐಪಿಎಲ್ನ 18ನೇ ಆವೃತ್ತಿಯಲ್ಲಿ ಪಂಜಾಬ್ ಭರ್ಜರಿ ಆರಂಭವನ್ನು ಪಡೆದಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು ಬಿಟ್ಟರೆ, ತಂಡ ಸಂಘಟಿತ ಆಟವನ್ನು ಪ್ರದರ್ಶಿಸಿದೆ. ತಂಡದ ಮುಂದಾಳು ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನಡೆಸುತ್ತಿದ್ದಾರೆ. ಯುವ ಹಾಗೂ ಭರವಸೆಯ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ಮಾರ್ಕಸ್ ಸ್ಟೋಯಿನಿಸ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಬೇಕಿದೆ. ಇನ್ನು ಮಾರ್ಕೊ ಜಾನ್ಸೆನ್, ಲಾಕಿ ಫರ್ಗುಸನ್, ಅರ್ಶ್ದೀಪ್ ಸಿಂಗ್ ಲಯ ಬದ್ಧ ದಾಳಿಯನ್ನು ಸಂಘಟಿಸಬೇಕಿದೆ.