ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಗಳ ನಡುವೆ ಮಂಗಳವಾರ ಬಿಗ್ ಫೈಟ್ ನಡೆಯಲಿದೆ. ಈ ಕಾದಾಟ ಎಲ್ಲರ ಚಿತ್ತ ಕದ್ದಿದೆ. ಸದ್ಯ ಉಭಯ ತಂಡಗಳು ಗೆಲುವಿನ ಟ್ರ್ಯಾಕ್ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿವೆ. ಈಗಾಗಲೇ ಒಂದು ಗೆಲುವು ದಾಖಲಿಸಿರುವ ಸಿಎಸ್ಕೆ ಮತ್ತೊಂದು ಗೆಲುವಿನ ಹುಡುಕಾಟದಲ್ಲಿದೆ. ಕೆಕೆಆರ್ ಈ ಲೀಗ್ನಲ್ಲಿ ಇನ್ನು ಗೆಲುವಿನ ಖಾತೆ ಓಪನ್ ಮಾಡದೆ ಇರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ.
ಚೆನ್ನೈ ಆಡಿದ 4 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದ್ದು, ಅಂಕ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಕೆಕೆಆರ್ ಆಡಿದ 4 ಪಂದ್ಯಗಳಲ್ಲಿ 3 ಸೋಲು, 1 ಪಂದ್ಯದ ಫಲಿತಾಂಶ ರಹಿತವಾಗಿದ್ದು, ಕೊನೆಯ ಸ್ಥಾನದಲ್ಲಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ, ಕೆಕೆಆರ್ಗಿಂತ ಬಲಿಷ್ಠವಾಗಿದೆ. ಈಗಾಗಲೇ ಉಭಯ ತಂಡಗಳು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸಿಎಸ್ಕೆ 20, ಕೆಕೆಆರ್ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಮೋಘ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆರ್ಭಟಿಸಿದ್ದರು. ಅಲ್ಲದೆ ಶತಕ ಬಾರಿಸಿ ಮಿಂಚಿದ್ದರು. ಇವರಿಗೆ ರುತುರಾಜ್ ಗಾಯಕ್ವಾಡ್ ಹಾಗೂ ಆಯುಷ್ ಮಾತ್ರೆ ಸಹ ಸ್ಥಿರ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಗಿದ್ದರು. ಹೀಗಾಗಿ ಈ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ಸರ್ಫರಾಜ್ ಖಾನ್ ಸಹ ಪರಿಸ್ಥಿತಿಗೆ ಅನುಗುಣವಾಗಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಈ ಲೀಗ್ನಲ್ಲಿ ಮೊದಲ ಪಂದ್ಯವನ್ನು ಆಡುವ ಕನಸು ಕಾಣುತ್ತಿರುವ ಡೆವಾಲ್ಡ್ ಬ್ರೆವಿಸ್ ಕೆಕೆಆರ್ ಬೌಲರ್ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚೆನ್ನೈ ತಂಡದ ವೇಗದ ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್, ಅಂಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್ ಕಾಣಿಸಿಕೊಳ್ಳಲಿದ್ದು ಭರವಸೆ ಮೂಡಿಸಿದ್ದಾರೆ. ಆಲ್ರೌಂಡರ್ ರೂಪದಲ್ಲಿ ಜೇಮಿ ಓವರ್ಟನ್ ಕಣಕ್ಕೆ ಇಳಿಯಲಿದ್ದಾರೆ. ಸ್ಪಿನ್ ಬೌಲರ್ ನೂರ್ ಅಹ್ಮದ್ ಒತ್ತಡವನ್ನು ಮೆಟ್ಟಿನಿಂತು ಬೌಲ್ ಮಾಡುವ ಅನಿವಾರ್ಯತೆ ಇದೆ.

ಕೆಕೆಆರ್ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಈ ಆಟಗಾರರು ತಂಡದ ಗೆಲುವಿಗೆ ಶ್ರಮಿಸುವ ಅನಿವಾರ್ಯತೆ ಇದೆ. ನಾಯಕ ಅಜಿಂಕ್ಯ ರಹಾನೆ, ಅಂಗ್ಕ್ರಿಷ್ ರಘುವಂಶಿ, ಕ್ಯಾಮರೂನ್ ಗ್ರೀನ್, ರೋವನ್ ಪೊವೆಲ್, ರಿಂಕು ಸಿಂಗ್ ಸ್ಥಿರ ಪ್ರದರ್ಶನದ ಮೂಲಕ ಎದುರಾಳಿ ಬೌಲರ್ಗಳನ್ನು ಕಾಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಕೆಕೆಆರ್ ತಂಡದ ವೇಗಿಗಳಾದ ವೈಭವ್ ಆರೋರಾ, ನವದೀಪ್ ಸೈನಿ, ಕಾರ್ತಿಕ್ ತ್ಯಾಗಿ, ಬಿಗುವಿನ ದಾಳಿ ನಡೆಸಿ ಬ್ಯಾಟರ್ಗಳನ್ನು ಕಟ್ಟಿ ಹಾಕಬೇಕಿದೆ. ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಸುನಿಲ್ ನರೈನ್ ಜಾದು ಬೌಲಿಂಗ್ ನಡೆಸಬೇಕಿದೆ. ಅಂದಾಗ ಮಾತ್ರ ಕೆಕೆಆರ್ ಮೊದಲ ಗೆಲುವಿನ ಕನಸು ನನಸಾಗುತ್ತದೆ.