18ನೇ ಆವೃತ್ತಿಯ ಹೈವೋಲ್ಟೇಜ್ ಪಂದ್ಯಗಳಲ್ಲಿ ಶುಕ್ರವಾರ ನಡೆಯುವ ಪಂದ್ಯಕ್ಕೂ ಸ್ಥಾನ. ಚೆನ್ನೈನಲ್ಲಿ ನಡೆಯಲಿರುವ ಈ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ಕದ್ದಿದೆ. ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಆರ್ಸಿಬಿ ಎರಡನೇ ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಚೆನ್ನೈ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಐಪಿಎಲ್ನಲ್ಲಿ ಒಟ್ಟು 33 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಸಿಎಸ್ಕೆ 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆರ್ಸಿಬಿ 11 ಪಂದ್ಯಗಳನ್ನು ಗೆದ್ದು ಬೀಗಿದೆ. ಆರ್ಸಿಬಿ ಚೆನ್ನೈ ಅಂಗಳದಲ್ಲಿ 2008ರಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆದ್ದಿತ್ತು. ಈಗ ಈ ಗೆಲುವಿನ ಬರವನ್ನು ಕೊನೆಗೊಳಿಸುವ ಲೆಕ್ಕಾಚಾರದಲ್ಲಿ ಆರ್ಸಿಬಿ ಇದೆ. ಉಭಯ ತಂಡಗಳ ನಡುವಿನ ಪಂದ್ಯದಲ್ಲಿ 226 ರನ್ ಗರಿಷ್ಠ ಮೊತ್ತವಾಗಿದೆ.

ಚೆನ್ನೈನ ಎಂಎ ಚಿದಂಬರಂ ಪಿಚ್ ಸಾಮಾನ್ಯವಾಗಿ ಸ್ಪಿನ್ ಬೌಲರ್ಗಳಿಗೆ ನೆರವು ನೀಡುತ್ತಿದೆ. ಬೇರೆ ಪಿಚ್ಗಳಂತೆ ಈ ಪಿಚ್ನಲ್ಲಿ ದೊಡ್ಡ ಸ್ಕೋರ್ಗಳು ದಾಖಲಾಗುವುದು ಡೌಟ್. ಈ ಪಿಚ್ನಲ್ಲಿ ಸ್ಪರ್ಧಾತ್ಮಕ ಸ್ಕೋರ್ನ್ನು ಸಹ ಇಲ್ಲಿ ಡಿಫೆಂಡ್ ಮಾಡಿಕೊಳ್ಳಬಹುದು. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಉಭಯ ತಂಡಗಳು ತಾನಾಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಮೈದಾನಕ್ಕೆ ಇಳಿಯಲಿವೆ. ಆರ್ಸಿಬಿ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ, ಚೆನ್ನೈ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಜಯ ಸಾಧಿಸಿ ಶುಭಾರಂಭ ಮಾಡಿವೆ.
ಐಪಿಎಲ್ ಇತಿಹಾಸದ ದೊಡ್ಡ ತಂಡಗಳಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳಿಗೆ ಸ್ಥಾನ. ಚೆನ್ನೈ ತಂಡ ದಾಖಲೆಯ ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ದಾಖಲೆ ಬರೆದಿದೆ. ಆದರೆ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲದೇ ಇದ್ದರೂ ಖ್ಯಾತಿಯಲ್ಲಿ ಸಿಎಸ್ಕೆಗೆ ಸಮನಾಗಿ ನಿಲ್ಲುವಷ್ಟು ಕ್ಷಮತೆಯನ್ನು ಹೊಂದಿದೆ. ಹೀಗಾಗಿ ಈ ಎರಡೂ ತಂಡಗಳ ಕಾದಾಟ ಎಲ್ಲರ ಚಿತ್ತ ಕದ್ದಿದೆ.

ಬೆಂಗಳೂರು ತಂಡದ ಬ್ಯಾಟಿಂಗ್ ಬಲಾಢ್ಯವಾಗಿದೆ. ಮೊದಲ ಪಂದ್ಯದಲ್ಲಿ ಆರಂಭಿಕರಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರೂ ಆಟಗಾರರು ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಕೈ ಬಿಟ್ಟು ನೆಲಕಚ್ಚಿ ಬ್ಯಾಟ್ ಮಾಡುವ ಅವಶ್ಯಕತೆ ಇದೆ. ನಾಯಕ ರಜತ್ ಪಟಿದಾರ್ ತಮ್ಮ ಜವಾಬ್ದಾರಿಯನ್ನು ಅರಿತು ಬ್ಯಾಟ್ ಮಾಡುವ ಅವಶ್ಯಕತೆ ಇದೆ. ಉಳಿದ ಬ್ಯಾಟರ್ಗಳಾದ ಲಿಯಾಮ್ ಲಿವಿಂಗ್ಸ್ಟೋನ್, ಆಲ್ರೌಂಡರ್ ಕೃನಾಲ್ ಪಾಂಡ್ಯ ಸ್ಥಿರ ಪ್ರದರ್ಶನ ನೀಡುವ ಅವಶ್ಯಕತೆ ಇದೆ.
ಚೆನ್ನೈ ತಂಡದಲ್ಲಿ ಖ್ಯಾತ ನಾಮ ಸ್ಪಿನ್ ಬೌಲರ್ಗಳು ಇದ್ದಾರೆ. ಚೆನ್ನೈ ತಂಡದಲ್ಲಿ ನೂರ್ ಅಹ್ಮದ್, ರವೀಂದ್ರ ಜಡೇಜಾ ಎದುರಾಳಿಗಳನ್ನು ಆರಂಭದಲ್ಲಿ ಕಾಡಬಲ್ಲ ಬೌಲರ್. ನಂತರ ಆರ್ ಅಶ್ವಿನ್ ತಮ್ಮ ಆಫ್ ಸ್ಪಿನ್ನಿಂದ ಎದುರಾಳಿಗಳನ್ನು ಕಾಡಬಲ್ಲರು. ಈ ಸ್ಪಿನ್ ಕೋಟೆಯನ್ನು ಮೆಟ್ಟನಿಲ್ಲಲು ಆರ್ಸಿಬಿ ಭರ್ಜರಿ ಅಭ್ಯಾಸವನ್ನು ಆರಂಭಿಸಿದೆ. ಈ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಲೆಫ್ಟ್ ಆರ್ಮ್ ಸ್ಪಿನ್ ಬೌಲರ್ ವಿರುದ್ಧ ಸತತ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಮೊದಲ ಪಂದ್ಯದಲ್ಲಿ ಈ ಮೂವರು ಸ್ಪಿನ್ ಬೌಲರ್ಗಳನ್ನು ಎದುರಿಸುವಲ್ಲಿ ಮುಂಬೈ ಇಂಡಿಯನ್ಸ್ ಎಡವಿತ್ತು. ಇವರು ಬೌಲ್ ಮಾಡಿದ 11 ಓವರ್ಗಳಲ್ಲಿ ಮುಂಬೈ 70 ರನ್ ಬಾರಿಸಿ 5 ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಈ ಸ್ಪಿನ್ ಬೌಲರ್ಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಭುವನೇಶ್ವರ್ ಕುಮಾರ್ ಗಾಯದಿಂದ ಚೇತರಿಸಿಕೊಂಡಿದ್ದು, ಎರಡನೇ ಪಂದ್ಯದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಯಾರ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಬಗ್ಗೆ ನಿರೀಕ್ಷೆಗಳು ಹುಟ್ಟಿವೆ. ಇನ್ನು ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ತಮ್ಮ ಶಿಸ್ತು ಬದ್ಧ ದಾಳಿಯಿಂದ ಎದುರಾಳಿಗಳಿಗೆ ಕಾಟ ನೀಡಬಲ್ಲ ಬೌಲರ್. ಆರ್ಸಿಬಿ ತಂಡದಲ್ಲಿ ಕೃನಾಲ್ ಪಾಂಡ್ಯ ರೂಪದಲ್ಲಿ ಒಬ್ಬ ಸ್ಪಿನ್ ಬೌಲರ್ ಇದ್ದಾರೆ. ಇವರಿಗೆ ಯಾರು ಸಾಥ್ ನಿಡುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಲಿಯಾಮ್ ಲಿವಿಂಗ್ ಸ್ಟೋನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ. ಇನ್ನು ಸುಯೇಶ್ ಶರ್ಮಾ ಪ್ಲೇಯಿಂಗ್ ಇಲೆವೆನ್ ಸೇರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಟಿದಾರ್, ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್ ಸ್ಟೊನ್, ಜಿತೇಶ್ ಶರ್ಮಾ, ಟೀಮ್ ಡೇವಿಡ್, ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್ವುಡ್, ಸುಯೇಶ್ ಶರ್ಮಾ, ಭುವನೇಶ್ವರ್ ಕುಮಾರ್
ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರಿನಲ್ಲಿ ಎರಡನೇ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಯಾವಾಗಲೂ ತನ್ನ ಆಲ್ರೌಂಡರ್ಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತದೆ. ಈ ತಂಡದಲ್ಲಿ ದೀಪಕ್ ಹೂಡ, ಶಿವಂ ದುಬೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಆರ್ ಅಶ್ವಿನ್ ಅವರ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಮೈದಾನದತ್ತ ಆಗಮಿಸಲಿದ್ದಾರೆ. ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್ ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇನ್ನು ಸ್ಟಾರ್ ಸ್ಪಿನ್ ಬೌಲರ್ಗಳ ಮೇಲೆ ಎಲ್ಲರ ಚಿತ್ತ ಕದ್ದಿದೆ.
ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ರುತುರಾಜ್ ಗಾಯಕ್ವಾಡ್ ಶುಕ್ರವಾರದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಉಳಿದಂತೆ ರಚಿನ್ ರವಿಂದ್ರ, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಆರ್ಸಿಬಿ ವಿರುದ್ಧ ಪಂದ್ಯಕ್ಕೆ ಸಿಎಸ್ಕೆ ಸಂಭಾವ್ಯ ತಂಡ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಎಂಎಸ್ ಧೋನಿ, ಆರ್ ಅಶ್ವಿನ್, ನಾಥನ್ ಎಲ್ಲಿಸ್, ನೂರ್ ಅಹ್ಮದ್, ಖಲೀಲ್ ಅಹ್ಮದ್.