ಭಾನುವಾರ ಮೇ 12, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 61ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎದುರು ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಸಿಎಸ್ಕೆ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ವಿಚಿತ್ರವಾಗಿ ಔಟ್ ಆಗಿದ್ದಾರೆ.
ಈ ಒಂದು ಔಟ್ನಿಂದ 2024ರ ಐಪಿಎಲ್ನಲ್ಲಿ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು, ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ಆರ್ಆರ್ ನೀಡಿದ ಟಾರ್ಗೆಟ್ ಚೇಸ್ ಮಾಡುವಾಗ 16ನೇ ಓವರ್ನಲ್ಲಿ ಜಡೇಜಾ ಅವರು ಅವೇಶ್ ಖಾನ್ ಬೌಲಿಂಗ್ನಲ್ಲಿ ಥರ್ಡ್ ಮ್ಯಾನ್ ಕಡೆಗೆ ಚೆಂಡನ್ನು ಹೊಡೆದು ಒಂದು ರನ್ ಗಳಿಸಿ ಮತ್ತೊಂದು ರನ್ಗಾಗಿ ಓಡುವಾಗ ನಾಯಕ ಋತುರಾಜ್ ಗಾಯಕ್ವಾಡ್ ರನ್ ಓಡಲು ನಿರಾಕರಿಸಿದರು. ಅಷ್ಟರಲ್ಲೇ ಜಡೇಜಾ ಅರ್ಧ ಪಿಚ್ಗೆ ಓಡಿ ಬಂದಿದ್ದರು.

ಈ ವೇಳೆ ಫೀಲ್ಡರ್ ನೇರವಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರಿಗೆ ಚೆಂಡನ್ನು ಎಸೆದರು. ತಕ್ಷಣವೇ ಸಂಜು ಚೆಂಡನ್ನು ನಾನ್ಸ್ಟ್ರೈಕರ್ನ ತುದಿಯಲ್ಲಿ ಸ್ಟಂಪ್ನ ಕಡೆಗೆ ಎಸೆದರು. ಆದರೆ ಚೆಂಡು ಥ್ರೋ ಸ್ಟಂಪ್ನ ದಿಕ್ಕಿನಲ್ಲಿ ಓಡುತ್ತಿದ್ದ ಜಡೇಜಾಗೆ ಬಡಿಯಿತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು
ಉದ್ದೇಶಪೂರ್ವಕವಾಗಿ ಜಡೇಜಾ ಫೀಲ್ಡಿಂಗ್ಗೆ ಅಡ್ಡಿಪಡಿಸಿದರೆ ಎಂದು ಮೂರನೇ ಅಂಪೈರ್ಗೆ ಮನವಿ ಮಾಡಿದರು.
ಮೂರನೇ ಅಂಪೈರ್ ಔಟ್ ಬಗ್ಗೆ ಪರಿಶೀಲನೆ ನಡೆಸಿದಾಗ ಜಡೇಜಾ ಅವರು ಚೆಂಡನ್ನು ನೋಡಿ ಉದ್ದೇಶಪೂರ್ವಕವಾಗಿ ತಾವು ಓಡುವ ದಿಕ್ಕನ್ನು ಬದಲಿಸಿದ್ದಾರೆ ಎಂಬುದು ತಿಳಿಯಿತು. ಹೀಗಾಗಿ ಮೂರನೇ ಅಂಪೈರ್ ಜಡೇಜಾ ಅವರು ರನ್ ಔಟ್ ಎಂದು ಆರ್ಆರ್ ಪರ ತೀರ್ಪ ಅನ್ನು ನೀಡಿದರು. ಹೀಗಾಗಿ ಜಡೇಜಾ 7 ಎಸೆತಗಳಲ್ಲಿ 5 ರನ್ ಗಳಿಸಿದ ಔಟಾದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಯಾವುದೇ ಅರ್ಧಶತಕವಿಲ್ಲದೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 142 ರನ್ಗಳ ಗುರಿ ನೀಡಿತ್ತು. 142 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಋತುರಾಜ್ ಗಾಯಕ್ವಾಡ್ ಅವರ ನಿರ್ಣಾಯಕ ಪ್ರದರ್ಶನದ ನೆರವಿನಿಂದ 18.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವಿನ ಗಡಿ ತಲುಪಿತು.
ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2024ರಲ್ಲಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕೊನೆಯ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಬೆಂಗಳೂರಿನಲ್ಲಿ ಎದುರಿಸಲಿದೆ. ಈ ಪಂದ್ಯವನ್ನೂ ಗೆಲ್ಲುವುದು ಕೂಡ ಸಿಎಸ್ಕೆ ತಂಡಕ್ಕೆ ಪ್ರಮುಖವಾಗಿದೆ.