
ಟೀಮ್ ಇಂಡಿಯಾದ ಮಾಜಿ ನಾಯಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಜನವರಿ 2ರ ಮಧ್ಯಾಹ್ನ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಗಂಗೂಲಿ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಆಸ್ಪತ್ರೆ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು ಅಭಿಮಾನಿಗಳಿಗೆ ನಿರಾಳತೆ ಮೂಡಿಸಿದೆ. ಕೋಟ್ಯಂತರ ಅಭಿಮಾನಿಗಳು ಸೌರವ್ ಗಂಗೂಲಿ ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಗಂಗೂಲಿ ಶೀಘ್ರವಾಗಿ ಚೇತರಿಕೆಯನ್ನು ಕಾಣಲಿ ಎಂದು ಹಾರೈಸಿದ್ದಾರೆ. ಭಾವುಕ ಸಂದೇಶವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಯುವರಾಜ್ ಸಿಂಗ್ ಮಾಜಿ ನಾಯಕನಿಗೆ ಶುಭಹಾರೈಸಿದ್ದಾರೆ.
"ದಾದಾ ನೀರ್ವೋರ್ವ ಹೋರಾಟಗಾರ. ಮತ್ತು ನಮಗಾಗಿ ನೀವು ಯಾವಾಗಲೂ ದಾರಿ ತೋರಿದವರು. ಶೀಘ್ರದಲ್ಲಿ ಚೇತರಿಕೆಯನ್ನು ಹೊಂದಿರಿ" ಎಂದು ಯುವರಾಜ್ ಸಿಂಗ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಟೀಮ್ ಇಂಡಿಯಾಗೆ ಮೊದಲ ಬಾರಿಗೆ ಅವಕಾಶವನ್ನು ಪಡೆದುಕೊಂಡಿದ್ದರು.
ಸೌರವ್ ಗಂಗೂಲಿಗೆ ಶನಿವಾರ ಸಂಜೆಯ ವೇಳೆಗೆ ಆಂಜಿಯೋಪ್ಲಾಸ್ಟಿ ನಡೆಸಲಾಗಿದ್ದು ಒಂದು ಸ್ಟಂಟ್ ಅಳವಡಿಸಲಾಗಿದೆ. ಸೌರವ್ ಗಂಗೂಲಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿಯನ್ನು ನೀಡಿದ್ದಾರೆ.
ಕೊಲ್ಕತ್ತಾ ದ ತಮ್ಮ ಮನೆಯಲ್ಲಿರುವ ಜಿಮ್ನಲ್ಲಿ ವರ್ಕೌಟ್ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಸೌರವ್ ಗಂಗೂಲಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಗಂಗೂಲಿ ಲಘು ಹೃದಯಾಘಾತಕ್ಕೆ ಒಳಗಾಗಿರುವ ಸಂಗತಿಯನ್ನು ವೈದ್ಯರು ಬಹಿರಂಗಪಡಿಸಿದ್ದರು. ಬಳಿಕ ಅವರಿಗೆ ಆಂಜಿಯೋಪ್ಲಾಸ್ಟಿ ನಡೆಸಲಾಯಿತು.