ವಿಶ್ವ ಟೆಸ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾದ ಸೋಲಿನ ಬಳಿಕ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಈ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ನೀಡಿದ ಕಳಪೆ ಪ್ರದರ್ಶನದ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದೆ. ಈ ಸಾಲಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ ಕೂಡ ಸೇರಿಕೊಂಡಿದ್ದಾರೆ.
ಕೌಂಟಿ ಚಾಂಪಿಯನ್ಶಿಪ್ನಲ್ಲಿ ಸಸೆಕ್ಸ್ ಪರವಾಗಿ ಆಡಿದ್ರೂ ಅದು ಭಾರತ ತಂಡದ ಪ್ರಯೋಜನಕ್ಕೆ ಬಾರಲಿಲ್ಲ ಎಂದಿದ್ದಾರೆ ದಾನಿಶ್ ಕನೆರಿಯಾ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆಟದ ಭರವಸೆ ನೀಡಿದ ಬಳಿಕ ಕಳಪೆ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡಿದ್ದು ಟೀಕೆಗೆ ಗುರಿಯಾಗಿದೆ.

"ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಎರಡು ತಿಂಗಳ ಕಾಲ ಇಂಗ್ಲೆಂಡ್ನಲ್ಲಿದ್ದು ಪೂಜಾರ ಸಸೆಕ್ಸ್ ಪರವಾಗಿ ಕೌಂಟಿ ಕ್ರಿಕೆಟ್ನಲ್ಲಿ ಆಡಿದ್ದಾರೆ. ಕೌಂಟಿಯಲ್ಲಿ ಆಡಿದ್ದರೂ ಅದರ ಲಾಭವನ್ನು ಭಾರತ ತಂಡಕ್ಕೆ ನೀಡುವಲ್ಲಿ ಅವರು ಯಶಸ್ವಿಯಾಗಿಲ್ಲ. ಇದರರ್ಥ ಕೌಂಟಿ ಕ್ರಿಕೆಟ್ನ ಬೌಲರ್ಗಳು ದುರ್ಬಲ ಹಾಗಾಗಿ ಅವರು ರನ್ಗಳಿಸಿದರು" ಎಂದಿದ್ದಾರೆ ದಾನಿಶ್ ಕನೆರಿಯಾ.
ಕೌಂಟಿ ಬೌಲರ್ಗಳಿಗೆ ಹೋಲಿಸಿದರೆ ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗ ಬಹಳ ಬಲಿಷ್ಠವಾಗಿದೆ. ಹಾಗಾಗಿ ಅವರ ವಿರುದ್ಧ ರನ್ಗಳಿಸಲು ಪೂಜಾರಾಗೆ ಸಾಧ್ಯವಾಗಿಲ್ಲ. ಅಂಥಾ ಪಿಚ್ನಲ್ಲಿ ಅವರು ಸುಮಾರು ಎರಡು ತಿಂಗಳಕಾಲ ಅಭ್ಯಾಸ ನಡೆಸಿದ್ದಾರೆ. ಹಾಗಿದ್ದರು ಕೂಡ ಅವರಿಂದ ಅತ್ಯುತ್ತಮವಾದ ಆಟ ಹೊರಬರಲಿಲ್ಲ ಎಂದಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ ದಾನಿಶ್ ಕನೆರಿಯಾ.
ಪೂಜಾರ ಸಹಿತ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರೀ ಅಂತರದಿಂದಸ ಸೋಲು ಕಾಣುವಂತಾಯಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.