
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅದ್ಭುತ ಪ್ರದರ್ಶನ ನೀಡಿತ್ತು. ಕೆಕೆಆರ್ ತಂಡದಲ್ಲಿದ್ದ ಯುವ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ಹೆಚ್ಚು ಗಮನ ಸೆಳೆದಿದ್ದರು. ದ್ವಿತೀಯ ಹಂತದ ಟೂರ್ನಿಯಲ್ಲಿ ಆರಂಭದಿಂದಲೂ ತಂಡದ ಬಲವಾಗಿ ನಿಂತ ಅಯ್ಯರ್ ತಂಡವನ್ನು ಫೈನಲ್ ಕಡೆಗೆ ಕೊಂಯೊಯ್ಯುವಲ್ಲಿ ಪ್ರಮುಖ ಕಾರಣರಾಗಿದ್ದರು.
ಈ ಐಪಿಎಲ್ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿರುವ ವೆಂಕಟೇಶ್ ಅಯ್ಯರ್, 40ರ ಸರಾಸರಿಯಲ್ಲಿ 320 ರನ್ ಬಾರಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಅಷ್ಟೇ ಅಲ್ಲ, ಬೌಲಿಂಗ್ನಲ್ಲೂ 3 ವಿಕೆಟ್ ಪಡೆದಿದ್ದಾರೆ. ಐಯ್ಯರ್ನಂಥ ಬಲಿಷ್ಠ ಆಟಗಾರರಿದ್ದಿದ್ದರಿಂದಲೇ ಕೆಕೆಆರ್ ತಂಡ ಕ್ವಾಲಿಫೈಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿ ಫೈನಲ್ಗೆ ಪ್ರವೇಶಿಸಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಯ್ಯರ್ 41 ಎಸೆತಗಳಲ್ಲಿ 55 ರನ್ ಬಾರಿಸಿದ್ದರು. ಪಂದ್ಯದಲ್ಲಿ ಕೆಕೆಆರ್ 3 ವಿಕೆಟ್ ಜಯ ಗಳಿಸಿತ್ತು. ಕ್ವಾಲಿಫೈಯರ್ ಪಂದ್ಯದ ಬಳಿಕ ಕೋಲ್ಕತ್ತಾ ಮುಖ್ಯ ಮೆಂಟರ್ ಡೇವಿಡ್ ಹಸ್ಸಿ ವೆಂಕಟೇಶ್ ಅಯ್ಯರ್ ಅವರನ್ನು ಶ್ಲಾಘಿಸಿದ್ದಾರೆ.
"ನಾವು ವೆಂಕಟೇಶ್ ಅಯ್ಯರ್ ಅವರಂಥ ಆಟಗಾರನನ್ನು ಕಂಡುಕೊಂಡಿದ್ದೇವೆ. ಆತನೊಬ್ಬ ಕ್ಲಾಸ್ ಆಟಗಾರ ಅಷ್ಟೇ ಅಲ್ಲ, ಆತನೊಬ್ಬ ಅದ್ಭುತ ವ್ಯಕ್ತಿ. ಒಂದನೇ ಬಾಲ್ನಿಂದಲೂ ಆತ ಚಚ್ಚಲು ಶುರು ಮಾಡುತ್ತಾನೆ. ನನಗನ್ನಿಸುತ್ತಿದೆ, ಕ್ರಿಕೆಟ್ನಲ್ಲಿ ಅಯ್ಯರ್ಗೆ ಉತ್ತಮ ಭವಿಷ್ಯವಿದೆ," ಎಂದು ಹಸ್ಸಿ ಹೇಳಿದ್ದಾರೆ.