
ನವದೆಹಲಿ, ಮಾರ್ಚ್ 23: ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟಿ20 ಮತ್ತು ಏಕದಿನ ಸರಣಿ ಗೆದ್ದು ಭಾರತ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಅದರಲ್ಲೂ ಗೆಲ್ಲಬೇಕಿದ್ದ ಏಕದಿನ ಸರಣಿ ಸೋತಿದ್ದೇಕೆ ಎಂದು ಕ್ರಿಕೆಟ್ ವಲಯದಲ್ಲಿ ಆಗ ಭಾರೀ ಚರ್ಚೆಯೂ ನಡೆದಿತ್ತು.
ಐದು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಭಾರತ 2-0ಯ ಮುನ್ನಡೆಯಲ್ಲಿತ್ತು. ಭಾರತ ಮುನ್ನಡೆಯಲ್ಲಿರುವುದನ್ನು ಕಂಡು ಸರಣಿ ನಮ್ಮದಾಗಲಿದೆ ಎಂದು ಭಾವಿಸಿದ್ದ ಬಿಸಿಸಿಐ ಸಣ್ಣ ಎಡವಟ್ಟೊಂದನ್ನು ಮಾಡಿತ್ತು. ಇದನ್ನೇ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟಿಗರು ಹೇಳಿದ್ದರು.
ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯ ಆಫ್ರಿಕಾ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧದಲ್ಲಿರುವ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಅಂದು ಭಾರತ ಏಕದಿನ ಸರಣಿ ಸೋತಿದ್ದೇಕೆ ಎಂಬುದಕ್ಕೆ ಕಾರಣ ತಿಳಿಸಿದ್ದಾರೆ.
'ಸರಣಿಯ ಕೊನೆಯೆರಡು ಪಂದ್ಯಗಳಲ್ಲಿ ಎಂಎಸ್ ಧೋನಿ ಆಡಿರಲಿಲ್ಲ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಆಸ್ಟ್ರೇಲಿಯಾದ ದೃಷ್ಟಿಯಲ್ಲಿ ನೋಡಿದರೆ, ಸರಣಿ ಗೆಲ್ಲಲು ಅದೇ ನಮಗೆ ದೊಡ್ಡ ಅವಕಾಶ, ದೊಡ್ಡ ದಾರಿಯಾಗಿ ಕಾಣಿಸಿತ್ತು' ಎಂದು ಇಂಡಿಯಾ ಟುಡೇ ಜೊತೆ ಮಾತನಾಡುತ್ತ ವಾರ್ನರ್ ಅಭಿಪ್ರಾಯಿಸಿದ್ದಾರೆ.
ಏಕದಿನ ಸರಣಿಯ ಕಡೆಯ ಎರಡು ಪಂದ್ಯಗಳಲ್ಲಿ ಧೋನಿಗೆ ವಿಶ್ರಾಂತಿ ನೀಡಿ, ರಿಷಬ್ ಪಂತ್ಗೆ ವಿಕೆಟ್ ಕೀಪರ್ ಜವಾಬ್ದಾರಿ ನೀಡಲಾಗಿತ್ತು. ಅನುಭವಿ ಮತ್ತು ಅಪಾಯಕಾರಿ ಆಟಗಾರ ಧೋನಿ ತಂಡದಲ್ಲಿ ಇಲ್ಲದಿರುವುದು ಎದುರಾಳಿ ಆಸ್ಟ್ರೇಲಿಯಾಕ್ಕೆ ಧೈರ್ಯ ತುಂಬಿತ್ತು. ಇದೇ ಆಸ್ಟ್ರೇಲಿಯಾ ಸರಣಿ ಗೆಲುವಿಗೆ ಕಾರಣ ಎಂಬಂತೆ ಹಲವಾರು ಕ್ರಿಕೆಟಿಗರು ತಿಳಿಸಿದ್ದರು. ವಾರ್ನರ್ ಕೂಡ ಇದನ್ನೇ ಹೇಳಿಕೊಂಡಿದ್ದಾರೆ.