ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಹಲವು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ಸಮಯದಲ್ಲಿ ಪಂತ್ ಮೈದಾನಕ್ಕೆ ಆಗಮಿಸಿದ್ದರು.
2023ರ ಐಪಿಎಲ್ನಿಂದ ಹೊರಗುಳಿದ ಬಳಿಕ ತನ್ನ ತಂಡಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಅವರು ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ರಿಷಬ್, ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ಫ್ರಾಂಚೈಸಿ ಮಾಲೀಕರು ಪಂತ್ ಅವರನ್ನು ಅಪ್ಪಿಕೊಂಡು ಸ್ವಾಗತ ಕೋರಿದರು. ರಿಷಬ್ ಪಂತ್ ಕೂಡ ಆಟವನ್ನು ನೋಡುತ್ತಾ ಅಭಿಮಾನಿಗಳತ್ತ ಕೈ ಬೀಸಿದರು.

ರಿಷಬ್ ಪಂತ್ ಜೊತೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಮೈದಾನದಲ್ಲಿ ಹಾಜರಿದ್ದರು. ಪಂದ್ಯದ ಸಮಯದಲ್ಲಿ ಇಬ್ಬರೂ ಕೂಡ ಸಾಕಷ್ಟು ಮಾತುಕತೆ ನಡೆಸುತ್ತಿದ್ದದ್ದು ಕಂಡು ಬಂದಿತು. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಲೀಕರು ಕೂಡ ಗ್ಯಾಲರಿಯಲ್ಲಿ ಹಾಜರಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ರಿಷಬ್ ಪಂತ್ ಅತ್ಯುತ್ತಮ ಸಂಬಂದ ಹೊಂದಿದ್ದಾರೆ. 2020 ರಲ್ಲಿ ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಫೈನಲ್ಗೆ ತಲುಪುವಲ್ಲಿ ಯಶಸ್ವಿಯಾಗಿತ್ತು.
ಪಂತ್ಗೆ ವಿಶೇಷ ಗೌರವ ಸಲ್ಲಿಸಲು ನಿರ್ಧಾರ
ರಿಷಬ್ ಪಂತ್ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2023ರ ತಮ್ಮ ಮೊದಲನೇ ಪಂದ್ಯದಲ್ಲಿ ವಿಶೇಷ ಗೌರವ ಸಲ್ಲಿಸಿತ್ತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಡಗೌಟ್ ಮೇಲೆ ರಿಷಬ್ ಪಂತ್ ಅವರ 17ನೇ ನಂಬರ್ ಜೆರ್ಸಿಯನ್ನು ಹಾಕುವ ಮೂಲಕ ನಾಯಕನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿತ್ತು. ನಾಯಕ ಡೇವಿಡ್ ವಾರ್ನರ್ ಕೂಡ ಜೆರ್ಸಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಎಂದೆಂದಿಗೂ ನೀವೇ ನಮ್ಮ ನಾಯಕ ಎನ್ನುವ ಸಂದೇಶವನ್ನು ಹಂಚಿಕೊಂಡಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ನಡೆಗೆ ಬಿಸಿಸಿಐ ಅಸಮಧಾನ ವ್ಯಕ್ತಪಡಿಸಿತ್ತು. ದುರಂತ ಸಂಭವಿಸಿದಾಗ ಅಥವಾ ಆಟಗಾರ ನಿವೃತ್ತಿಯಾದಾಗ ಮಾತ್ರ ಈ ರೀತಿ ಮಾಡಬಹುದು, ಆದರೆ ಪಂತ್ ಗಾಯದಿಂದ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಆದಷ್ಟು ಬೇಗನೆ ಮೈದಾನಕ್ಕೆ ಬರುವ ಸಾಧ್ಯತೆ ಇದೆ ಎಂದಿರುವ ಬಿಸಿಸಿಐ ಮತ್ತೊಮ್ಮೆ ಈ ರೀತಿ ಮಾಡದಂತೆ ಡೆಲ್ಲಿ ಫ್ರಾಂಚೈಸಿಗೆ ಸೂಚನೆ ನೀಡಿದೆ. ಮತ್ತೊಂದು ಮೂಲಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಒಂದು ಪಂದ್ಯದಲ್ಲಿ ಎಲ್ಲಾ ಆಟಗಾರರು ರಿಷಬ್ ಪಂತ್ ಅವರ 17ನಂಬರ್ ಜೆರ್ಸಿಯನ್ನು ತೊಟ್ಟು ಕಣಕ್ಕಿಳಿಯಲು ನಿರ್ಧಾರ ಮಾಡಿದೆ ಎನ್ನಲಾಗಿದೆ.