ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಫಿಟಲ್ಸ್ ತಂಡ ಮೊದಲ ಗೆಲುವು ಸಾಧಿಸಿದೆ. ಮೊದಲ ಐದು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ್ದ ಡಿಸಿ ತಂಡ ಕಡೆಗೂ ಆರನೇ ಪಂದ್ಯದಲ್ಲಿ ಸೋಲಿನ ಸರಪಳಿ ಕಡಿದುಕೊಂಡಿದೆ. ಆದರೆ ಕೆಕೆಆರ್ ವಿರುದ್ಧವೂ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಸೋಲಿನ ಅಂಚಿನವರೆಗೆ ಸಾಗಿ ಅಂತಿಮವಾಗಿ ಗೆಲುವಿನ ನಿಟ್ಟುಸಿರು ಬಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಅಲ್ಲದೆ ಬ್ಯಾಟಿಂಗ್ನಲ್ಲಿನ ಈ ರೀತಿಯ ಹೀನಾಯ ಪ್ರದರ್ಶನ ತಂಡದ ನಾಯಕನ ಬೇಸರಕ್ಕೂ ಕಾರಣವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ನಾಯಕ ಡೇವಿಡ್ ವಾರ್ನರ್ ಟೂರ್ನಿಯ ಆರಂಭದಿಂದಲೂ ಏಕಾಂಗಿ ಪ್ರದರ್ಶನ ನೀಡಿಕೊಂಡು ಬರುತ್ತಿದ್ದಾರೆ. ಉಳಿದ ಯಾವ ಆಟಗಾರರಿಂದಲೂ ಅವರಿಗೆ ಅಗತ್ಯ ನೆರವು ದೊರೆಯುತ್ತಿಲ್ಲ. ಕ್ರೀಸ್ನಲ್ಲಿ ಹೆಚ್ಚು ಹೊತ್ತು ಯಾರು ಕೂಡ ನೆಲೆಯೂರಲು ಸಾಧ್ಯವಾಗುತ್ತಿಲ್ಲ. ಕೊಲ್ಕತ್ತಾ ವಿರುದ್ಧದ ಲೋ ಸ್ಕೋರಿಂಗ್ ಪಂದ್ಯದಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ಈ ಹಿನ್ನೆಲೆಯಲ್ಲಿ ವಾರ್ನರ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ 128 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಸ್ಪೋಟಕ ಆರಂಭವನ್ನು ನೀಡಿದರು ಕೂಡ ಪೃಥ್ವಿ ಶಾ, ಸರ್ಫರಾಜ್ ಖಾನ್ ಮತ್ತು ಮಿಚೆಲ್ ಮಾರ್ಶ್ ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದರು. ಆರಂಭದಲ್ಲಿ ವೇಗವಾಗಿ ರನ್ಗಳಿಸಲು ಆರಂಭಿಸಿದ್ದ ವಾರ್ನರ್ ವಿಕೆಟ್ಗಳು ಉರುಳುತ್ತಿದ್ದಂತೆಯೇ ರಕ್ಷಣಾತ್ಮಕ ಆಟದ ಮೊರೆ ಹೋದರು.
ಪಂದ್ಯದ ಮುಕ್ತಾಐದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡೇವಿಡ್ ವಾರ್ನರ್ ತಮ್ಮ ಅಸಮಾಧಾನವನ್ನು ಹೊರಹಾಕಿದರು. "ನಾವು ಈ ವಿಚಾರವಾಗಿ ಹೆಚ್ಚಾಗಿ ಚರ್ಚೆ ನಡೆಸಿಲ್ಲ ಯಾಕೆಂದರೆ ನಿಮ್ಮಲ್ಲಿನ ಕೌಶಲ್ಯಕ್ಕೆ ನೀವು ಬೆಂಬಲವಾಗಿರಬೇಕು. ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಅದನ್ನು ನೀವೇ ಕಂಡುಕೊಳ್ಳಬೇಕು" ಎಂದಿದ್ದಾರೆ ಡೇವಿಡ್ ವಾರ್ನರ್.
"150 ಕಿಮಿ ವೇಗದಲ್ಲಿ ಎಸೆಯುವ ಬೌಲರ್ನನ್ನು ನೀವು ಎದುರಿಸುತ್ತೀರಿ ಎಂದಾದರೆ ನಿಮ್ಮಲ್ಲಿ ಕೌಶಲ್ಯ ಹಾಗೂ ರನ್ಗಳಿಸುವ ವಿಧಾನ ಇರಬೇಕಾಗುತ್ತದೆ. ಅವರು ನಿಮ್ಮನ್ನು ಗುರಿಯಾಗಿಸಿಕೊಂಡು ಬೌಲಿಂಗ್ ನಡೆಸುತ್ತಿದ್ದಾರೆ ಎಂದಾದರೆ ರನ್ಗಳಿಸಲು ಬೇಕಾದ ದಾರಿಯನ್ನು ನೀವು ಕಂಡುಕೊಳ್ಳಬೇಕು" ಎಂದಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್.
ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 127 ರನ್ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಅಲ್ಪ ಮೊತ್ತದ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅದಕ್ಕೆ ಪೂರಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಪೋಟಕ ಆರಂಭವನ್ನು ಕೂಡ ಪಡೆದುಕೊಂಡಿತ್ತು. ಆದರೆ ಈ ಪಂದ್ಯದಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ಗೆ ಮತ್ತೊಂದು ತುದಿಯಲ್ಲಿ ಅಗತ್ಯ ನೆರವು ದೊರೆಯಲೇ ಇಲ್ಲ. ಕೊನೆಯ ಓವರ್ವರೆಗೂ ಸಾಗಿದ ಪಂದ್ಯದಲ್ಲಿ ಪ್ರಯಾಸಕರ ರೀತಿಯಲ್ಲಿ ಡಿಸಿ ಗೆಲುವು ಸಾಧಿಸಿತು.