ಐಪಿಎಲ್ ಟೂರ್ನಿಯನ್ನು ಯುವ ಪ್ರತಿಭೆಗಳ ಲೀಗ್ ಎಂದು ಕರೆಯಲಾಗುತ್ತದೆ. ಆದರೆ ಇಂದು ಐಪಿಎಲ್ 2025 ರಲ್ಲಿ ಟೀಮ್ ಇಂಡಿಯಾದ ತ್ರಿವಳಿ ಶತಕವೀರ ಸಿಕ್ಕ ಅವಕಾಶವನ್ನು ಬಾಚಿಕೊಂಡಿದ್ದಾರೆ. ಐಪಿಎಲ್ 2025 ರ ಮೊದಲ ಪಂದ್ಯದಲ್ಲೇ ಬಿರುಸಿನ ಪ್ರದರ್ಶನ ನೀಡುವ ಮೂಲಕ ಕನ್ನಡಿಹ ಕರುಣ್ ನಾಯರ್ ಬಿಸಿಸಿಐನ ಬಾಗಿಲು ತಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬ್ಯಾಟರ್ ಕರುಣ್ ನಾಯರ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಕರುಣ್ ನಾಯರ್ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದರೆ, ಡೆಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ದೇಶೀಯ ಕ್ರಿಕೆಟ್ನಲ್ಲಿ ತೋರಿದ ಸ್ಥಿರ ಪ್ರದರ್ಶನವನ್ನು ಕರುಣ್ ನಾಯರ್ ಐಪಿಎಲ್ನಲ್ಲಿಯೂ ಮುಂದುವರೆಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹಲವು ವರ್ಷಗಳ ನಂತರ ಕರುಣ್ ನಾಯರ್ ತಮ್ಮ ಅರ್ಧಶತಕವನ್ನು ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕನ್ನಡಿಗ ಕರುಣ್ ನಾಯರ್ ಟೀಕಾಕಾರರ ಬಾಯಿ ಮುಚ್ಚಿಸುವಂತೆ ಮಾಡಿದ್ದಾರೆ.
ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. 3 ವರ್ಷಗಳ ನಂತರ, ಕರುಣ್ ನಾಯರ್ ಐಪಿಎಲ್ಗೆ ಪ್ರವೇಶಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದ ಸಂಚಲನ ಸೃಷ್ಟಿಸಿದ್ದಾರೆ. ಕರುಣ್ ನಾಯರ್ 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ 89 ರನ್ ಗಳಿಸಿ ಔಟಾದರು.
ಬುಮ್ರಾಗೆ ಚಾರ್ಜ್
ಜಸ್ಪ್ರೀತ್ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಆದರೆ ಕರುಣ್ ನಾಯರ್ ಬುಮ್ರಾ ಅವರನ್ನೂ ಬಿಡಲಿಲ್ಲ. ನಾಯರ್ ಬುಮ್ರಾ ಅವರನ್ನು ಮೊದಲ ಬಾರಿಗೆ ಎದುರಿಸಿದಾಗ, ಅವರು ಆ ಓವರ್ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಇದಾದ ನಂತರ, ಅವರು ಎರಡನೇ ಬಾರಿಗೆ ಬುಮ್ರಾ ಅವರನ್ನು ಎದುರಿಸಿದಾಗ, ಎರಡು ಸಿಕ್ಸರ್ಗಳು ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ತಮ್ಮ ಅಬ್ಬರದ ಶೈಲಿಯಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಬುಮ್ರಾ ಅವರ 9 ಎಸೆತಗಳಲ್ಲಿ ನಾಯರ್ 26 ರನ್ ಗಳಿಸಿದರು.
ಕರುಣ್ ನಾಯರ್ ಈ ಅದ್ಭುತ ಇನ್ನಿಂಗ್ಸ್ ನಂತರ ಬಿಸಿಸಿಐಗೆ ಸಂದೇಶವನ್ನು ಕಳುಹಿಸಿದ್ದಾರೆ. 8 ವರ್ಷಗಳ ಹಿಂದೆ, ಕರುಣ್ ನಾಯರ್ ತ್ರಿಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಅಚ್ಚರಿಯ ಪ್ರವೇಶ ಮಾಡಿದ್ದರು. ಆದಾಗ್ಯೂ, ಅಂದಿನಿಂದ ಅವರು ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ. ಈಗ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಲು ಸಂದೇಶ ಕೊಟ್ಟಿದ್ದಾರೆ.