
ನವದೆಹಲಿ, ಮಾರ್ಚ್ 12: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರ ಸನ್ಮಾನ ಕಾರ್ಯಕ್ರಮವನ್ನು ದೆಹಲಿ ಆ್ಯಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ರದ್ದುಗೊಳಿಸಿದೆ. ಪುಲ್ವಾಮಾ ದಾಳಿಗೆ ಸಂಬಂಧಿಸಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಡಿಡಿಸಿಎ ತಿಳಿಸಿದೆ.
ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಬುಧವಾರ (ಮಾರ್ಚ್ 13) ಭಾರತದ ವಿರುದ್ಧ 5ನೇ ಮತ್ತು ಕೊನೆಯ ಏಕದಿನ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೂ ಮುನ್ನ ದೆಹಲಿಯ ಮೂವರು ಕ್ರಿಕೆಟ್ ದಂತಕತೆಗಳನ್ನು ಗೌರವಿಸಲು ಡಿಡಿಸಿಎ ಯೋಚಿಸಿತ್ತು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸಂತಾಪ ಸೂಚಿಸಿ ಐಪಿಎಲ್ ಅದ್ದೂರಿ ಆರಂಭೋತ್ಸವವನ್ನು ನಡೆಸದಿರಲಿ ಬಿಸಿಸಿಐ ನಿರ್ಧರಿಸಿತ್ತು. ಅಲ್ಲದೆ ಸಮಾರಂಭೋತ್ಸಕ್ಕೆ ತಗಲುವ ವೆಚ್ಚವನ್ನು ಯೋಧರ ಕುಟುಂಬಗಳ ನೆರವಿಗೆ ನೀಡಲು ಬಯಸಿತ್ತು. ಕ್ರಿಕೆಟಿಗರ ಸನ್ಮಾನ ಕಾರ್ಯಕ್ರಮ ರದ್ದುಗೊಳಿಸಿರುವ ಡಿಡಿಸಿಎ ಕೂಡ ಇದೇ ನಿಲುವನ್ನು ತಾಳಿದೆ.
'ಸೆಹ್ವಾಗ್, ಗಂಭೀರ್ ಮತ್ತು ವಿರಾಟ್ ಕೊಹ್ಲಿಗೆ ಸನ್ಮಾನ ಕಾರ್ಯಕ್ರಮ ನಡೆಸಲು ನಾವು ನಿರ್ಧರಿಸಿದ್ದೆವು. ಆದರೆ ಬಿಸಿಸಿಐಯು ಐಪಿಎಲ್ ಆರಂಭೋತ್ಸವವನ್ನು ರದ್ದುಗೊಳಿಸಿರುವುದರಿಂದ ನಾವೂ ಕಾರ್ಯಕ್ರವನ್ನು ಕೈಬಿಟ್ಟಿದ್ದೇವೆ' ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ತಿಳಿಸಿದ್ದಾರೆ.