ಅಂಕಪಟ್ಟಿಯಲ್ಲಿ ಬಡ್ತಿ ಸಾಧಿಸಲು ಇಂದು ದೆಹಲಿಯಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟವನ್ನು ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಡೆಲ್ಲಿ ಆಡಿದ 9 ಪಂದ್ಯಗಳಲ್ಲಿ 6 ಜಯ ಸಾಧಿಸಿ 12 ಅಂಕಗಳನ್ನು ಕಲೆ ಹಾಕಿದ್ದು, ಪ್ಲೇ ಆಫ್ ಮೇಲೆ ಕಣ್ಣು ನೆಟ್ಟಿದೆ. ಇನ್ನು ಕೆಕೆಆರ್ ಇಷ್ಟೇ ಪಂದ್ಯಗಳಲ್ಲಿ 3 ಜಯ ಸಾಧಿಸಿದೆ. ಹೀಗಾಗಿ ಅಜಿಂಕ್ಯ ರಹಾನೆ ಪಡೆಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಡೆಲ್ಲಿ, ಕೆಕೆಆರ್ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಈ ಪ್ಲೇಯರ್ಗಳು ಗೆಲುವಿನಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಡೆಲ್ಲಿ, ಆರ್ಸಿಬಿ ವಿರುದ್ಧ ಸೋಲು ಕಂಡಿತ್ತು. ಈ ಸೋಲಿನ ಕಹಿಯನ್ನು ನೆನಪು ಹಾರಲು ಡೆಲ್ಲಿಗೆ ಈಗ ಒಳ್ಳೆಯ ಅವಕಾಶ. ಇನ್ನು ಕೆಕೆಆರ್ ಈ ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ಪ್ಲೇ ಆಫ್ ರೇಸ್ನಲ್ಲಿ ಜೀವಂತವಾಗಿರಲು ಪ್ಲ್ಯಾನ್ ಮಾಡಿಕೊಂಡಿದೆ. ಈ ವೇಳೆ ಕೆಕೆಆರ್ ತಂಡಕ್ಕೆ ಮುಂದಿನ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸುವುದು ಅನಿವಾರ್ಯವಾಗಿದೆ. ಅಂದಾಗ ಮಾತ್ರ ಪ್ಲೇ ಆಫ್ಗೆ ಸುಲಭವಾಗಿ ಹೋಗಬಹುದು.

ದೆಹಲಿಯ ಪಿಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ತಂಡಕ್ಕೆ ಹೆಚ್ಚಿನ ಅನುಕೂಲ ಸಿಗಲಿದೆ. ಆದರೆ ಕಳೆದ ಪಂದ್ಯದಲ್ಲಿ ಆರ್ಸಿಬಿ ಚೇಸ್ ಮಾಡಿದ ರೀತಿಯಿಂದ ಬೇರೆ ತಂಡಗಳು ಸ್ಪೂರ್ತಿ ಪಡೆಯಬಹುದು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ಕೆಎಲ್ ರಾಹುಲ್, ಕರುಣ್ ನಾಯರ್, ಅಕ್ಷರ್ ಪಟೇಲ್, ಟ್ರಿಸ್ಟನ್ ಸ್ಟಬ್ಸ್, ಆಶುತೋಷ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಈ ಸ್ಟಾರ್ ಆಟಗಾರರ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಈ ಆಟಗಾರರು ಸಮಯೋಚಿತ ಆಟವನ್ನು ಆಡಿದಲ್ಲಿ ದೊಡ್ಡ ಗೆಲುವಿನ ಕನಸು ನನಸಾಗುತ್ತದೆ.

ಡೆಲ್ಲಿ ತಂಡದಲ್ಲಿ ಸ್ಟಾರ್ ಬೌಲರ್ಗಳು ಇದ್ದು ಎದುರಾಳಿ ಬ್ಯಾಟರ್ಗಳಿಗೆ ಕಾಟ ನೀಡಬಲ್ಲರು. ಯಾರ್ಕರ್ ಸ್ಪೇಷಲಿಸ್ಟ್ ಖ್ಯಾತಿಯ ಮಿಚೆಲ್ ಸ್ಟಾರ್ಕ್, ಮುಕೇಶ್ ಕುಮಾರ್ ವೇಗದ ದಾಳಿಯಿಂದ ಬ್ಯಾಟರ್ಗಳನ್ನು ಕಾಡಬಲ್ಲರು. ಕುಲ್ದೀಪ್ ಯಾದವ್ ನಿಜಕ್ಕೂ ಪ್ರಸಕ್ತ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ವಿಕೆಟ್ ಬೇಟೆಯಲ್ಲಿ ಕೊಂಚ ಹಿಂದೆ ಇರುವ ಕುಲ್ದೀಪ್ ರನ್ಗಳಿಗೆ ಕಡಿವಾಣ ಹಾಕುವ ಬೌಲರ್. ಈ ಬೌಲರ್ಗಳು ಶಿಸ್ತು ಬದ್ಧ ಪ್ರದರ್ಶನ ನೀಡಿದಲ್ಲಿ ಜಯದ ಆಸೆ ಫಲಿಸುತ್ತದೆ.
ಹಾಲಿ ಚಾಂಪಿಯನ್ ಕೆಕೆಆರ್ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗುವ ಅವಶ್ಯಕತೆ ಇದೆ. ವೈಭವ್ ಆರೋರ್, ಹರ್ಷಿತ್ ರಾಣಾ ತಮ್ಮ ಬಿಗುವಿನ ದಾಳಿಯಿಂದ ಆರಂಭದಲ್ಲಿ ಅಬ್ಬರಿಸಬೇಕಿದೆ. ಸುನಿಲ್ ನರೈನ್, ವರುಣ್ ಚಕ್ರವರ್ತಿ ಸ್ಪಿನ್ ಮೋಡಿ ನಡೆಸಬೇಕಿದೆ. ಅಂದಾಗ ಜಯದ ಆಸೆ ಫಲಿಸುತ್ತದೆ. ಇನ್ನು ತಂಡದ ಸ್ಟಾರ್ ಬ್ಯಾಟರ್ಗಳು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡಬೇಕಿದೆ. ಅಜಿಂಕ್ಯ ರಹಾನೆ ಉತ್ತಮವಾಗಿ ರನ್ ಕಲೆ ಹಾಕುತ್ತಿದ್ದು ಇವರಿಗೆ ಬೇರೆ ಆಟಗಾರರು ಉತ್ತಮ ಸಾಥ್ ನೀಡಬೇಕಿದೆ. ವೆಂಕಟೇಶ್ ಅಯ್ಯರ್, ರಿಂಕು ಸಿಂಗ್ ತಮ್ಮ ಸ್ಥಿರ ಪ್ರದರ್ಶನ ನೀಡಿದ್ದೇ ಆದಲ್ಲಿ ಗೆಲುವು ಸುಲಭ.