
ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ಗಳ ಅಂತರದ ಸೋಲು ಕಂಡ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ನ ಚೇರ್ಮನ್ ಪಾರ್ಥ್ ಜಿಂದಾಲ್ ಟ್ವೀಟ್ವೊಂದನ್ನು ಹಂಚಿಕೊಂಡಿದ್ದಾರೆ. ಜಿಂದಾಲ್ ಅವರ ಈ ಟ್ವೀಟ್ ಕೊಲ್ಕತ್ತಾ ನೈಟ್ ರೈಡರ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಆಘಾತಕಾರಿಯಾಗಿ 10 ರನ್ಗಳಿಂದ ಸೋಲು ಕಂಡ ನಂತರ ಅದರ ಸಹ ಮಾಲೀಕ ಶಾರೂಖ್ ಖಾನ್ ಮಾಡಿದ ಟ್ವೀಟ್ಗೆ ಹೋಲಿಕೆ ಮಾಡಲಾಗುತ್ತಿದೆ.
"ಕೆಳ ಕ್ರಮಾಂಕದ ಆಟಗಾರರಿಂದ ಹಾಗೂ ಬೌಲರ್ಗಳಿಂದ ಅತ್ಯುತ್ತಮ ಹೋರಾಟದ ನಂತರವೂ ಈ ಸೋಲನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ" ಎಂದು ಜಿಂದಾಲ್ ಟ್ವೀಟ್ ಮಾಡಿದ್ದಾರೆ. ಆದರೆ ಕೆಕೆಆರ್ ಮಾಲೀಕ ಶಾರೂಖ್ ಖಾನ್ ಅವರಂತೆ ಅಭಿಮಾನಿಗಳಲ್ಲಿ ಕ್ಷಮೆಯನ್ನು ಕೇಳುವಂತಾ ಅತಿರೇಕಕ್ಕೆ ಡೆಲ್ಲಿ ಮಾಲೀಕ ಹೋಗಿಲ್ಲ ಎಂಬುದು ಗಮನಾರ್ಹ. ಇದರ ಬದಲಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದ್ದು ಮತ್ತಷ್ಟು ಬಲಿಷ್ಠವಾಗಿ ವಾಪಾಸಾಗುವ ಮಾತನಾಡಿದ್ದಾರೆ.
"ನಾವು ಇದರಿಂದ ಪಾಠವನ್ನು ಕಲಿಯುತ್ತೇವೆ ಮತ್ತು ಉತ್ತಮ ಹಾಗೂ ಚಾಣಾಕ್ಷ ತಂಡವಾಗಿ ಮರಳುತ್ತೇವೆ, ಡೆಲ್ಲಿ ಕ್ಯಾಪಿಟಲ್ಸ್ ಉತ್ತಮವಾಗಿ ಹೋರಾಡಿದ್ದೀರಿ. ಭಾನುವಾರದ ಪಂದ್ಯದಲ್ಲಿ ತಿರುಗಿ ಬೀಳೋಣ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಭಿನಂದನೆಗಳು" ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಯ್ದೇವ್ ಉನಾದ್ಕಟ್ ಅವರ ದಾಳಿಗೆ ಆರಂಭದಲ್ಲಿಯೇ ತತ್ತರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕರಾದ ಪೃಥ್ವಿ ಶಾ, ಶಿಖರ್ ಧವನ್ ನಂತರ ಮೂರನೇ ಕ್ರಮಾಂಕದ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆಯನ್ನು ಅಗ್ಗಕ್ಕೆ ಔಟ್ ಮಾಡಿ ಡೆಲ್ಲಿಗೆ ಉನಾದ್ಕಟ್ ಆಘಾತವನ್ನು ನೀಡಿದರು. ಆದರೆ ನಾಯಕ ಪಂತ್ 51 ರನ್ ಜೊತೆಗೆ ಲಲಿತ್ ಯಾದವ್ ಹಾಗೂ ಟಾಮ್ ಕರನ್ ಅವರ ಉಪಯುಕ್ತ ಆಟದ ನೆರವಿನಿಂದ ಡೆಲ್ಲಿ 148/7 ರನ್ಗಳಿಸಲು ಶಕ್ತವಾಗಿತ್ತು.